ರಾಜ್ಯ

ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡದಿರುವುದು ಎಲ್ಲಾ ರಾಜ್ಯಗಳ ಹಿತಾಸಕ್ತಿಯಿಂದ ಕೈಗೊಂಡ ನಿರ್ಧಾರ: ಎಫ್‌ಸಿಐ ಅಧಿಕಾರಿ

Ramyashree GN

ಬೆಂಗಳೂರು: ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡದಿರುವ ಕೇಂದ್ರದ ನಿರ್ಧಾರವು ಆ ರಾಜ್ಯದ ಮೇಲೆ ಕೈಗೊಂಡಿರುವ ನಿರ್ದಿಷ್ಟ ನಿಲುವಲ್ಲ. ಆದರೆ, ಎಲ್ಲಾ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಒದಗಿಸುವ ದೊಡ್ಡ ಹಿತಾಸಕ್ತಿಯಿಂದ ತೆಗೆದುಕೊಂಡ ನಿರ್ಧಾರ ಎಂದು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಪಶ್ಚಿಮ ಬಂಗಾಳದಂತಹ ರಾಜ್ಯಗಳೂ ಇದೇ ಅವಧಿಯಲ್ಲಿ ಹೆಚ್ಚುವರಿ ಅಕ್ಕಿಗೆ ಮನವಿ ಸಲ್ಲಿಸಿವೆ. ಎಲ್ಲಾ ರಾಜ್ಯಗಳ ಹಿತಾಸಕ್ತಿ ಪರಿಗಣಿಸಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕರ್ನಾಟಕ ವಲಯದ ಪ್ರಧಾನ ವ್ಯವಸ್ಥಾಪಕ ಭೂಪೇಂದ್ರ ಸಿಂಗ್ ಭಾಟಿ ತಿಳಿಸಿದ್ದಾರೆ.

ಭಾರತೀಯ ಆಹಾರ ನಿಗಮದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕೇಂದ್ರ ಸರ್ಕಾರವು ಸದ್ಯ ಲಭ್ಯವಿರುವ ಸಂಗ್ರಹಣೆ ಆಧಾರದ ಮೇಲೆ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ ಮತ್ತು ಲಭ್ಯತೆ ಇದ್ದಲ್ಲಿ ಕೇಂದ್ರವೇ ಆ ಪ್ರಮಾಣವನ್ನು 7 ರಿಂದ 10 ಕೆಜಿಗೆ ಹೆಚ್ಚಿಸುತ್ತಿತ್ತು ಎಂದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾಟಿ, ಜುಲೈ 31ರ ವೇಳೆಗೆ ಕರ್ನಾಟಕದಲ್ಲಿ ಅಕ್ಕಿ ದಾಸ್ತಾನು 7,02,647.28 ಮೆಟ್ರಿಕ್ ಟನ್ ಮತ್ತು ಗೋಧಿ 62,880.13 ಮೆಟ್ರಿಕ್ ಟನ್ ಆಗಿದೆ. 'ಕಳೆದ ವರ್ಷದಲ್ಲಿ, ಭಾರತೀಯ ಆಹಾರ ನಿಗಮವು ಕರ್ನಾಟಕ ವಿಭಾಗೀಯ ಕಚೇರಿಗಳ ಅಡಿಯಲ್ಲಿ ಡಿಪೋಗಳಿಂದ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ 18,61,005 ಮೆಟ್ರಿಕ್ ಟನ್ ಬಲವರ್ಧಿತ ಅಕ್ಕಿಯನ್ನು ವಿತರಿಸಿದೆ ಮತ್ತು 22,54,351 ಮೆಟ್ರಿಕ್ ಟನ್ ಬಲವರ್ಧಿತವಲ್ಲದ ಅಕ್ಕಿಯನ್ನು ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಮತ್ತು ಎಥೆನಾಲ್ ಉತ್ಪಾದನೆಗೆ ನೀಡಲಾಗಿದೆ' ಎಂದು ಅವರು ಹೇಳಿದರು.

ಭಾರತೀಯ ಆಹಾರ ನಿಗಮವು ಪ್ರತಿ ವಾರ ಇ-ಹರಾಜಿನ ಮೂಲಕ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಖಾಸಗಿ ಖರೀದಿದಾರರಿಗೆ ಗೋಧಿ ಮತ್ತು ಅಕ್ಕಿಯನ್ನು ನೀಡಲಾಗುತ್ತಿದೆ ಮತ್ತು ಸಂಸ್ಕರಣೆದಾರರು/ಹಿಟ್ಟಿನ ಗಿರಣಿದಾರರು ಹರಾಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಇದು ಬೆಲೆ ಏರಿಕೆ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಭಾಟಿ ಹೇಳಿದರು.

ಗೋಧಿಯ ಮೀಸಲು ಬೆಲೆಯನ್ನು ನ್ಯಾಯೋಚಿತ ಮತ್ತು ಸರಾಸರಿ ಗುಣಮಟ್ಟಕ್ಕಾಗಿ ಪ್ರತಿ ಕ್ವಿಂಟಲ್‌ಗೆ 2,150 ರೂ. ಮತ್ತು 'under relaxed specifications' ಅಡಿಯಲ್ಲಿ ಕ್ವಿಂಟಲ್‌ಗೆ 2,125 ರೂ. ಎಂದು ನಿಗದಿಪಡಿಸಲಾಗಿದೆ. ಖಾಸಗಿ ವ್ಯಕ್ತಿಗಳಿಗೆ ಅಕ್ಕಿಯ ಮೀಸಲು ಬೆಲೆ ಕ್ವಿಂಟಲ್‌ಗೆ 3,100 ರೂ. (ಬಲವರ್ಧಿತ ಅಕ್ಕಿಗೆ ಕ್ವಿಂಟಲ್‌ಗೆ 73 ರೂ. ಹೆಚ್ಚು) ಗೆ ನೀಡಲಾಗುತ್ತದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್, ಸರಳ ಮತ್ತು ಪಾರದರ್ಶಕವಾಗಿದೆ ಎಂದು ಭಾಟಿ ಹೇಳಿದರು.

SCROLL FOR NEXT