ರಾಜ್ಯ

ಜೆಡಿಎಸ್ ಮುಖಂಡ ಅಪ್ಪುಗೌಡ ಹತ್ಯೆಗೆ ಯತ್ನ: 6 ಮಂದಿ ಬಂಧನ

Manjula VN

ಮಂಡ್ಯ: ಜೆಡಿಎಸ್ ಮುಖಂಡ ಅಪ್ಪು ಪಿ. ಗೌಡ ಎಂಬುವರ ಮೇಲೆ ಮಾರಣಾಂತಿಕ ದಾಳಿ ನಡೆಸಿ, ಹತ್ಯೆಗೆ ಯತ್ನ ನಡೆಸಿರುವ ಘಟನೆಯೊಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಶನಿವಾರ ನಡೆದಿದೆ.

ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ 9ರ ಸುಮಾರಿಗೆ ಭೇಟಿ ನೀಡಿದ್ದ ವೇಳೆ ಅಪ್ಪು ಗೌಡ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ದುಷ್ಕರ್ಮಿಗಳು ಹರಿತವಾದ ಆಯುಧದಿಂದ ದಾಳಿ ನಡೆಸಿದ ಪರಿಣಾಮ ಅಪ್ಪು ಅವರ ಭುಜ ಹಾಗೂ ಬೆನ್ನಿಗೆ ತೀವ್ರತರ ಗಾಯಗಳಾಗಿವೆ.

ಪ್ರತಿ ಶನಿವಾರ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದ ಅಪ್ಪುಗೌಡ ಅವರು, ಇಂದೂ ಕೂಡ ದೇವಸ್ಥಾನಕ್ಕೆ ತೆರಳಿದ್ದರು. ಆತನ ಬರುವಿಕೆಯನ್ನು ತಿಳಿದಿದ್ದ ದುಷ್ಕರ್ಮಿಗಳು, ಹೊಂಚು ಹಾಕಿ ಕುಳಿತಿದ್ದರು. ದೇವಸ್ಥಾನ ಪ್ರವೇಶಿಸಿ, ಕೈ ಮುಗಿಯುತ್ತಿದ್ದ ವೇಳೆ ಹಿಂದಿನಿಂದ ದಾಳಿ ನಡೆಸಿದ್ದಾರೆ.

ಈ ವೇಳೆ ದೇಗುಲದಲ್ಲಿದ್ದ ಭಕ್ತರು ಕೂಗಿಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಗಾಯಗೊಂಡಿದ್ದ ಅಪ್ಪು ಅವರನ್ನು ಕೂಡಲೇ ಮದ್ದೂರು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಅಪ್ಪು ಗೌಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧ ಪರಾರಿಯಾಗುತ್ತಿದ್ದ 6 ಮಂದಿ ದುಷ್ಕರ್ಮಿಗಳನ್ನು ಬೆನ್ನಟ್ಟಿದ ಪೊಲೀಸರು, ಮಳವಳ್ಳಿಯ ಹಲಗೂರು ಬಳಿ ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಈ ಸಂಬಂಧ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT