ರಾಜ್ಯ

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಹೇಳಿಕೆ: ಬಿಜೆಪಿ ಶಾಸಕ ಚಂದ್ರು ಲಮಾಣಿ ಯೂ-ಟರ್ನ್!

Nagaraja AB

ಗದಗ: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕುರಿತು ಹೇಳಿಕೆ ನೀಡಿರುವ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರ ಭಾಷಣದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಟೀಕೆಗೆ ಒಳಗಾದ ನಂತರ ಇದೀಗ ಉಲ್ಟಾ ಹೊಡೆದಿದ್ದಾರೆ. 

ಶುಕ್ರವಾರ ಶಿರಹಟ್ಟಿ ಪಟ್ಟಣದ ಖಾಸಗಿ ಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಲಮಾಣಿ, ಕಳೆದ ಎರಡು ದಶಕಗಳಿಂದ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದ್ದು, ಅಭಿವೃದ್ಧಿಯಾಗಬೇಕಾದರೆ ಉತ್ತರ ಕರ್ನಾಟಕ ಎಂದು ಪ್ರತ್ಯೇಕಿಸಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು. ಎಂಎಲ್‌ಸಿ ಎಸ್‌ವಿ ಸಂಕನೂರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಬಳಿಕ ಸ್ಪಷ್ಟನೆ ನೀಡಿದ ಶಾಸಕರು, ಕರ್ನಾಟಕ ಇಬ್ಭಾಗವಾಗಬೇಕು ಎಂದು ಹೇಳಿಲ್ಲ. ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಇನ್ನೂ ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಹೇಳಲು ಪ್ರಯತ್ನಿಸುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು.

ಹಲವು ಕ್ಷೇತ್ರಗಳಲ್ಲಿ ಇನ್ನೂ ಮೂಲ ಸೌಕರ್ಯಗಳಿಲ್ಲ, ಹಲವು ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಹೆಚ್ಚು ಶಾಸಕರಿದ್ದಾರೆ, ಆದರೆ ಇನ್ನೂ ಈ ಪ್ರದೇಶವು ಹಿಂದುಳಿದಿದೆ ಎಂದು ಲಮಾಣಿ ಹೇಳುವುದು ವಿಡಿಯೋದಲ್ಲಿದೆ.

ಈ ಹೇಳಿಕೆ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕರ್ನಾಟಕವನ್ನು ವಿಭಜಿಸುವ ಉದ್ದೇಶವಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಶಾಸಕರು ಸ್ಪಷ್ಟಪಡಿಸಿದರು. 

SCROLL FOR NEXT