ಮೈಸೂರು: ನೆರೆ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ತೀವ್ರವಾಗಿ ಕಿಡಿಕಾರಿದ್ದಾರೆ.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತರು ಕೆಆರ್ಎಸ್ ಜಲಾಶಯದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಅಣೆಕಟ್ಟಿನ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೂಡಲೇ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: I.N.D.I.A.ಗೆ ಜೀವದಾನ ಮಾಡಲು ಕಾವೇರಿ ಹಿತವೇ ಬಲಿದಾನ; ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಆಡಿ ಮಕ್ಮಲ್ ಟೋಪಿ: ಎಚ್.ಡಿಕೆ
ಈ ಸಂದರ್ಭದಲ್ಲಿ ಮಾತನಾಡಿದ ಪುಟ್ಟಣ್ಣಯ್ಯ ಅವರು, ನಾಲೆಗಳಿಗೆ ನೀರು ಬಿಡುವಂತೆ ಈ ಭಾಗದ ರೈತರು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಮೊದಲು ಇಲ್ಲಿನ ರೈತರಿಗೆ ನೀರು ಬಿಡದೆ, ನೆರೆಯ ರಾಜ್ಯಕ್ಕೆ ನೀರನ್ನು ಹೇಗೆ ಬಿಡುಗಡೆ ಮಾಡುತ್ತಿದ್ದಾರೆ? ಮೊದಲು ನಮ್ಮ ರಾಜ್ಯದಲ್ಲಿ ಬೆಳೆದ ಬೆಳೆಗೆ ನೀರು ಬಿಡಬೇಕು ಎಂದು ಹೇಳಿದರು.
ಮಳೆಯ ಕೊರತೆ ಮತ್ತು ಅಣೆಕಟ್ಟಿನ ಒಳಹರಿವು ಕಡಿಮೆ ಇದ್ದು, ಇಂತಹ ನಿರ್ಣಾಯಕ ಸಮಯದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಸೂಚಿಸಿರುವ ಸಂಕಷ್ಟ ಸೂತ್ರವನ್ನು ಪರಿಗಣಿಸಬೇಕಾಗಿದೆ, ಆದರೆ, ಅಧಿಕಾರಿಗಳು ಯಾವ ಸೂತ್ರ ಅಥವಾ ಅಂದಾಜಿನಲ್ಲಿ ನೀರು ಬಿಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಕೂಡಲೇ ಬೆಂಗಳೂರಿಗೆ ತೆರಳಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಶ್ರೀರಂಗಪಟ್ಟಣದಲ್ಲೂ ರೈತ ಮುಖಂಡರು ಕೃಷ್ಣೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.