ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಶನಿವಾರ ಮತ್ತೊಮ್ಮೆ ಒಂದೇ ವೇದಿಕೆ ಹಂಚಿಕೊಂಡು ಯಶವಂತಪುರ ಕ್ಷೇತ್ರದ ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
ಹೆಮ್ಮಿಗೆಪುರ ನಿವಾಸಿಗಳ ಅಹವಾಲು ಆಲಿಸಿದ ಶಿವಕುಮಾರ್, ಮೊದಲು ತಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸುವಂತೆ ಸೋಮಶೇಖರ್ ಕೇಳಿಕೊಂಡಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಿ ಅಧಿಕಾರಿಗಳನ್ನು ಕರೆತಂದಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಆಲಿಸುತ್ತೇನೆ' ಎಂದರು.
'ಸೂಕ್ತ ರಸ್ತೆ, ಸುಗಮ ಸಂಚಾರ, ಕಸ ವಿಲೇವಾರಿ ಹಾಗೂ ಸರ್ಕಾರಿ ಆಸ್ಪತ್ರೆ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸುವಂತೆ ನಿವಾಸಿಗಳು ಶಾಸಕರಿಗೆ ಮನವಿ ಸಲ್ಲಿಸಿದರು.
'ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ಕೆಲಸವನ್ನು ಮೊದಲು ಮಾಡುವುದಾಗಿ ಭರವಸೆ ನೀಡಿದ್ದಾರೆ. ನೀರು ಸರಬರಾಜು ಮತ್ತು ನಿಗಮ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಬಂದಿದ್ದು, ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ’ ಎಂದು ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸೇರ್ತಾರೆ ಎಂಬ ವದಂತಿ ನಡುವೆ ಸಿಎಂ ಸಿದ್ದರಾಮಯ್ಯ ಭೇಟಿಯಾದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್!
ಉತ್ತರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅಪಾರ್ಟ್ಮೆಂಟ್ ಅಸೋಸಿಯೇಷನ್ಗಳು ಮತ್ತು ಸಮುದಾಯಗಳು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಮೂಲಕ ಜವಾಬ್ದಾರಿಯಿಂದಿರುವುದನ್ನು ಡಿಸಿಎಂ ಶ್ಲಾಘಿಸಿದರು. ಬನಶಂಕರಿ 6ನೇ ಹಂತದ ನಿವಾಸಿಗಳು ಆ ಪ್ರದೇಶದಲ್ಲಿ ಹಸಿ ತ್ಯಾಜ್ಯ ಸಂಸ್ಕರಣಾ ಘಟಕದ ಬಗ್ಗೆ ದೂರು ನೀಡಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಅವರು ತಿಳಿಸಿದರು.
ಸೋಮಶೇಖರ್ ಜೊತೆಗಿನ ಸಂಬಂಧದ ಕುರಿತು ಮಾತನಾಡಿದ ಶಿವಕುಮಾರ್, ನಮ್ಮ ಸ್ನೇಹ 35 ವರ್ಷಗಳಷ್ಟು ಹಳೆಯದು. ಅದು ಈಗ ಫಲ ನೀಡಿದೆ. ಹಣ್ಣುಗಳನ್ನು ಕಿತ್ತು ತಿನ್ನಲು ಬೇರೆಯವರಿಗೆ ಬಿಡಬಾರದು ಎಂಬ ಭಾವನೆ ಬಂದಿದೆ ಎಂದರು.
ಇದನ್ನೂ ಓದಿ: ಅನಿವಾರ್ಯವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ; ನಾನು ಲೋಕಸಭೆಗೆ, ನನ್ನ ಮಗ ವಿಧಾನಸಭೆಗೆ ಎಂಬುದು ಸುಳ್ಳು: ಸೋಮಶೇಖರ್
'ನನಗೆ ಕನಕಪುರಕ್ಕೆ ಹೋಗಲು ಸಾಧ್ಯವಾಗಿಲ್ಲ. ಆದರೆ, ಸೋಮಶೇಖರ್ ನನ್ನನ್ನು ಎರಡು ಬಾರಿ ನಿಮ್ಮ ಏರಿಯಾಕ್ಕೆ ಕರೆತಂದಿದ್ದಾರೆ. ನಿಮ್ಮ ಸಮಸ್ಯೆಯ ಬಗ್ಗೆ ನಮಗೂ ಕಾಳಜಿ ಇದೆ. ಈ ಚುನಾವಣೆಯಲ್ಲಿ ನೀವು ಕಾಂಗ್ರೆಸ್ಗೆ ಬೆಂಬಲ ನೀಡಿಲ್ಲ. ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಬೇಕು' ಎಂದರು.