ಪ್ರಾತಿನಿಧಿಕ ಚಿತ್ರ 
ರಾಜ್ಯ

ಸರ್ಕಾರಕ್ಕೆ ನೀಡಿದ್ದ ಗಡುವು ಅಂತ್ಯ; ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಸಭೆಯಲ್ಲಿ 'ಬೆಂಗಳೂರು ಬಂದ್' ಬಗ್ಗೆ ನಿರ್ಧಾರ

ತಮ್ಮ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ನೀಡಿದ್ದ ಹತ್ತು ದಿನಗಳ ಗಡುವು ಬುಧವಾರ ಅಂತ್ಯಗೊಂಡಿದ್ದು, ಖಾಸಗಿ ಸಾರಿಗೆ ಸಂಸ್ಥೆಗಳು ಇದೀಗ ‘ಬೆಂಗಳೂರು ಬಂದ್’ಗೆ ಸಜ್ಜಾಗುತ್ತಿವೆ.

ಬೆಂಗಳೂರು: ತಮ್ಮ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ನೀಡಿದ್ದ ಹತ್ತು ದಿನಗಳ ಗಡುವು ಬುಧವಾರ ಅಂತ್ಯಗೊಂಡಿದ್ದು, ಖಾಸಗಿ ಸಾರಿಗೆ ಸಂಸ್ಥೆಗಳು ಇದೀಗ ‘ಬೆಂಗಳೂರು ಬಂದ್’ಗೆ ಸಜ್ಜಾಗುತ್ತಿವೆ.

ಒಕ್ಕೂಟದ ಭಾಗವಾಗಿರುವ ಎಲ್ಲ 32 ಸಂಘಗಳ ಪ್ರತಿನಿಧಿಗಳು ಗುರುವಾರ ಸಭೆ ಸೇರಿ ಬಂದ್‌ನ ದಿನಾಂಕವನ್ನು ನಿರ್ಧರಿಸಲಿದ್ದಾರೆ. ಖಾಸಗಿ ಬಸ್‌ಗಳು, ಕ್ಯಾಬ್‌ಗಳು ಮತ್ತು ಆಟೋಗಳನ್ನು ತಮ್ಮ ಪ್ರಯಾಣಕ್ಕಾಗಿ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರಿಗೆ ಬಂದ್ ಪರಿಣಾಮ ಬೀರಲಿದೆ.

ಒಕ್ಕೂಟದ ಸದಸ್ಯರು ಮಾತನಾಡಿ, ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಆಟೋಗಳು, 3 ಲಕ್ಷ ಕ್ಯಾಬ್‌ಗಳು ಮತ್ತು 50,000 ಖಾಸಗಿ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟಾರೆಯಾಗಿ 2,000 ಕೋಟಿ ರೂ. ಗಳನ್ನು ನೇರ ತೆರಿಗೆ ರೂಪದಲ್ಲಿ ಮತ್ತು ಪ್ರತಿ ವರ್ಷ ಡೀಸೆಲ್, ವಾಹನ ಬಿಡಿಭಾಗಗಳು ಮತ್ತು ಟೈರ್‌ಗಳನ್ನು ಖರೀದಿಸುವ ಮೂಲಕ ಸುಮಾರು 20,000 ಕೋಟಿ ರೂ. ಗಳನ್ನು ಪರೋಕ್ಷ ತೆರಿಗೆ ರೂಪದಲ್ಲಿ ಪಾವತಿಸುತ್ತಿವೆ ಎಂದರು. 

ಜೂನ್ 11ರಿಂದ ರಾಜ್ಯದಾದ್ಯಂತ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಪ್ರಾರಂಭವಾದ ನಂತರ ಅವರೆಲ್ಲರೂ ತಮ್ಮ ಆದಾಯದ ಶೇ 40 ಕ್ಕಿಂತ ಹೆಚ್ಚು ಕಳೆದುಕೊಂಡಿದ್ದಾರೆ ಎಂದು ಫೆಡರೇಶನ್ ಹೇಳುತ್ತಿದೆ.

ಟಿಎನ್ಐಇ ಜೊತೆಗೆ ಮಾತನಾಡಿದ ಫೆಡರೇಶನ್‌ನ ನಾಮನಿರ್ದೇಶಿತ ಅಧ್ಯಕ್ಷ ನಟರಾಜ್ ಶರ್ಮಾ, 'ಕೋವಿಡ್ ಲಾಕ್‌ಡೌನ್‌ಗಳಿಂದ ಉಂಟಾದ ದೊಡ್ಡ ನಷ್ಟದ ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಶಕ್ತಿ ಯೋಜನೆಯು ನಮ್ಮ ಶೇ 45 ಕ್ಕಿಂತ ಹೆಚ್ಚು ವ್ಯವಹಾರಗಳನ್ನು ಇಲ್ಲವಾಗಿಸಿದೆ. ಬಸ್ ಮಾಲೀಕರು ಹಾಗೂ ಕ್ಯಾಬ್ ಮತ್ತು ಆಟೋ ಚಾಲಕರು ಭಾರಿ ಸಾಲದ ಹೊರೆ ಹೊತ್ತಿದ್ದಾರೆ. ಸರ್ಕಾರ ನಮ್ಮ ಸಮಸ್ಯೆಗಳನ್ನು ಆಲಿಸಿ ಶಕ್ತಿ ಯೋಜನೆಯಿಂದ ಆಗಿರುವ ನಷ್ಟವನ್ನು ಭರಿಸಬೇಕೆಂದು ನಾವು ಬಯಸುತ್ತೇವೆ' ಎಂದರು.

ಪರಿಹಾರವನ್ನು ಪಡೆಯಲು ಜುಲೈ 24ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗಿನ ನಮ್ಮ ಮೊದಲ ಸಭೆಯ ಬಳಿಕ ನಾವು ಒಂದು ತಿಂಗಳಿಗಿಂತ ಹೆಚ್ಚು ಕಾಲ ತಾಳ್ಮೆಯಿಂದ ಕಾಯುತ್ತಿದ್ದೇವೆ. ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂಬ ಸಾರಿಗೆ ಸಚಿವರ ಭರವಸೆಗೆ ಮಣಿದ ನಾವು ಜುಲೈ 27ರಂದು ಕರೆ ನೀಡಲಾಗಿದ್ದ ನಮ್ಮ ಬೆಂಗಳೂರು ಬಂದ್‌ ಅನ್ನು ಮುಂದೂಡಿದ್ದೇವೆ ಮತ್ತು ಈ ಬಾರಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶರ್ಮಾ ಹೇಳಿದರು.

ಎಲ್ಲ ಪ್ರತಿನಿಧಿಗಳು ಗುರುವಾರ ಸಭೆ ನಡೆಸುತ್ತಿದ್ದು, ಬಂದ್‌ನ ದಿನಾಂಕವನ್ನು ನಾವು ಪ್ರಕಟಿಸುತ್ತೇವೆ. ಸಾರ್ವಜನಿಕರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ಆದರೆ, ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ರಾಜ್ಯ ಸರ್ಕಾರಕ್ಕೆ ನಮ್ಮ ನೋವನ್ನು ತಿಳಿಸಲು ಬಂದ್ ಅನಿವಾರ್ಯವಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT