ರಾಜ್ಯ

ಚಿಕ್ಕಬಳ್ಳಾಪುರ: ಸೇಡು ತೀರಿಸಿಕೊಳ್ಳಲು ತಂಗಿಯ ಮಕ್ಕಳನ್ನು ಅಪಹರಿಸಿ, ಓರ್ವ ಬಾಲಕನನ್ನು ಕೊಂದು ಹೂತು ಹಾಕಿದ ದೊಡ್ಡಮ್ಮ!

Shilpa D

ಚಿಕ್ಕಬಳ್ಳಾಪುರ: ತಂಗಿಯ ಇಬ್ಬರು ಮಕ್ಕಳನ್ನು ಅಪಹರಿಸಿದ ದೊಡ್ಡಮ್ಮ  ಆರು ವರ್ಷದ ಬಾಲಕನನ್ನು ಕೊಂದು ಹೂತು ಹಾಕಿರುವ ಘಟನೆ ಚಿಕ್ಕಬಳ್ಳಾಪುರದ ಪೆರೇಸಂದ್ರ ಪೊಲೀಸ್ ವ್ಯಾಪ್ತಿಯ ಮುತ್ತಕಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮತ್ತೊಬ್ಬ ಬಾಲಕಿಯನ್ನು ಬೆಂಗಳೂರಿನಲ್ಲಿ ಬಿಡಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾಳೆ. ಅಂಬಿಕಾ ಮತ್ತು ಅನಿತಾ ಸಹೋದರಿಯರಾಗಿದ್ದು, ಅವರ ತಂದೆ ಬಹಳ ಹಿಂದೆಯೇ ನಿಧನರಾದರು. ಅವರ ತಾಯಿ ಅವರನ್ನು ಬೆಳೆಸಿ ಮದುವೆ ಮಾಡಿದರು. ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಅಂಬಿಕಾ ಮತ್ತು ಅನಿತಾ ಇಬ್ಬರೂ ತಮ್ಮ ಗಂಡನ ಮನೆಗಳನ್ನು ತೊರೆದು ತಮ್ಮ ಪೋಷಕರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಸಹೋದರಿಯೊಂದಿಗೆ ಸೇಡು ತೀರಿಸಿಕೊಳ್ಳಲು, ಅಂಬಿಕಾ ತನ್ನ ತಂಗಿಯ ಎರಡೂ ಮಕ್ಕಳನ್ನು ಅಪಹರಿಸಿ ಕೊಲ್ಲಲು ಸಂಚು ರೂಪಿಸಿದಳು.

ಮಕ್ಕಳೊಂದಿಗೆ ಆಟವಾಡುವ ನೆಪದಲ್ಲಿ ಮಧು (6) ಮತ್ತು ಮನುಶ್ರೀ (4) ಅವರನ್ನು ದೂರದ ಸ್ಥಳಕ್ಕೆ ಕರೆದೊಯ್ದ ಅಂಬಿಕಾ ಬಾಲಕನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾಳೆ. ಬಳಿಕ ಮಗುವಿನ ಶವವನ್ನು ಮಾವಿನ ತೋಪಿನಲ್ಲಿ ಹೂತು ಹಾಕಿದ್ದಾಳೆ. ಅವಳು ಮನುಶ್ರೀಯನ್ನು ಕೊಲ್ಲಲು ಬಯಸಿದ್ದಳು ಆದರೆ  ತನ್ನ  ಪ್ಲಾನ್ ಬದಲಾಯಿಸಿ, ಆಕೆಯನ್ನು ಬೆಂಗಳೂರಿಗೆ ಬಿಡಲು ನಿರ್ಧರಿಸಿದ್ದಾಳೆ.

ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಅಂಬಿಕಾ ವರ್ತನೆಯ ಬಗ್ಗೆ ಚಾಲಕನಿಗೆ ಅನುಮಾನ ಬಂದು ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚಿಕ್ಕಬಳ್ಳಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಂಡವೊಂದು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ತನ್ನ ಸಹೋದರಿ ಅನಿತಾಳೊಂದಿಗೆ ಸೇಡು ತೀರಿಸಿಕೊಳ್ಳಲು ತನ್ನ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಬಹಿರಂಗಪಡಿಸಿದ್ದಾಳೆ.

SCROLL FOR NEXT