ರಾಜ್ಯ

ವಂಚನೆ ಪ್ರಕರಣ: ಮಾಜಿ ಸಂಸದ ಎಲ್​.ಆರ್.ಶಿವರಾಮೇಗೌಡ ಸೇರಿ 7 ಮಂದಿ ವಿರುದ್ಧ ಸಿಬಿಐ FIR

Srinivasamurthy VN

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ಪಡೆದು ವಂಚಿಸಿರುವ ಆರೋಪದಡಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಅವರ ಕುಟುಂಬ ಸದಸ್ಯರೂ ಸಹಿತ ಒಟ್ಟು 7 ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ 12.48 ಕೋಟಿ ರೂ. ಸಾಲ ಪಡೆದು ವಂಚಿಸಿದ್ದಾರೆ ಎಂದು  ಆರೋಪಿಸಿ ನಗರದ ಎಂ.ಜಿ.ರಸ್ತೆಯ ಪಂಜಾಬ್​ ನ್ಯಾಷನಲ್ ಬ್ಯಾಂಕ್ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಡಿ.ಮೋದಿ ದೂರು ಸಲ್ಲಿಸಿದ್ದರು. ದೂರಿನನನ್ವಯ ನಂಜಪ್ಪ ಶಿವಪ್ರಸಾದ್‌, ಪತ್ನಿ ಉಮಾ ಪ್ರಸಾದ್, ರಾಯಲ್ ಕಂಕಾರ್ಡ್ ಎಜುಕೇಷನ್ ಟ್ರಸ್ಟ್, ಟ್ರಸ್ಟ್‌ನ ಆಡಳಿತ ಮಂಡಳಿಯ ಸದಸ್ಯರಾದ ಎಲ್.ಆ‌ರ್.ಶಿವರಾಮೇಗೌಡ, ಪತ್ನಿ ಸುಧಾ ಶಿವರಾಮೇಗೌಡ, ಮಗ ಚೇತನ್ ಗೌಡ, ಸೊಸೆ ಎಲ್.ಎಸ್. ಭವ್ಯಾ ಗೌಡ, ಬ್ಯಾಂಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.

ಆರೋಪಿಗಳು ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದು, ನಂತರ ಸಾಲದ ಹಣವನ್ನು ಬೇರೆಡೆ ವರ್ಗಾಯಿಸಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ್ದಾರೆ. ಸಾಲ ಮರುಪಾವತಿಯೂ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 120b (ಕ್ರಿಮಿನಲ್‌ ಪಿತೂರಿ), 420 (ವಂಚನೆ), 468 (ಮೋಸ ಮಾಡುವ ಉದ್ದೇಶದಿಂದ ಪೋರ್ಜರಿ) ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
 

SCROLL FOR NEXT