ರಾಜ್ಯ

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಪತ್ತೆ, ಗಡಿಪಾರು: ವಿಧಾನಪರಿಷತ್ತಿನಲ್ಲಿ ಡಾ. ಜಿ.ಪರಮೇಶ್ವರ್

Nagaraja AB

ಬೆಳಗಾವಿ: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ನಿವಾಸಿಗಳನ್ನು ಪತ್ತೆಹಚ್ಚಲಾಗುತ್ತಿದೆ. ನಂತರ ಅವರನ್ನು ಗಡಿವರೆಗೂ ಕರೆದೊಯ್ದು ಬಿಎಸ್ಎಫ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿ ಗಡಿಪಾರು ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವಿಧಾನಪರಿಷತ್ತಿನಲ್ಲಿಂದು ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಇತ್ತೀಚಿಗೆ ಪೊಲೀಸ್ ಇಲಾಖೆ 45 ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ ಬರೋಬ್ಬರಿ 5 ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನೂ, ಅಕ್ರಮ ವಲಸಿಗರು ಇರುವ 28 ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಹೀಗೆ, ಹಂತ ಹಂತವಾಗಿ ಅಕ್ರಮ ವಲಸಿಗರನಯ ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ವಾಸಿಸುತ್ತಿರುವ ಅಕ್ರಮ ಬಾಂಗ್ಲಾ ಹಾಗೂ ವಿದೇಶಿ ವಲಸಿಗರನ್ನು ಪತ್ತೆ ಹಚ್ಚುವ ಸಲುವಾಗಿ ಗುಪ್ತಚರ ವಿಭಾಗದ ಸಿಬ್ಬಂದಿಗಳು, ಠಾಣಾ ಸಿಬ್ಬಂದಿಗಳು ಸೂಕ್ತ ಗಸ್ತು ಮಾಡುವ ಮೂಲಕ ಅಕ್ರಮ ಬಾಂಗ್ಲಾ ಹಾಗೂ ವಿದೇಶಿ ವಲಸಿಗರನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದುವರೆವಿಗೂ ಅಕ್ರಮ ಬಾಂಗ್ಲಾ ಮತ್ತು ವಿದೇಶಿಯರ ಮೇಲೆ ಒಟ್ಟು 764 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ 53 ಪ್ರಕರಣಗಳು ದಾಖಲಾಗಿವೆ. ವಿದೇಶಿಯರುಗಳ ವಿರುದ್ಧವೂ 711 ಪ್ರಕರಣಗಳು ದಾಖಲಾಗಿದೆ. ಜೊತೆಗೆ ಒಟ್ಟು 135 ಜನ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ. ಪ್ರಮುಖವಾಗಿ ಈ ಅಕ್ರಮ ವಲಸಿಗರಿಗೆ ನಕಲಿ ಆಧಾರ ಕಾರ್ಡ್ ಸೇರಿದಂತೆ ಇನ್ನಿತರೆ  ದಾಖಲೆಗಳನ್ನು ಮಾಡಿ ಕೊಡುತ್ತಿರುವ ಎಂಟಕ್ಕೂ ಅಧಿಕ ಜನ ಮಧ್ಯವರ್ತಿ ಏಜೆಂಟ್‌ಗಳನ್ನು ಪತ್ತೆ ಮಾಡಿ ಹಲವಾರು ದಾಖಲೆ ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈ ವೇಳೆ ಮರು ಪ್ರಶ್ನಿಸಿದ ಉಮಾಶ್ರೀ, ರಾಜ್ಯ ಸರ್ಕಾರ ಅಕ್ರಮ ವಲಸಿಗರು ರಾಜ್ಯದ ಗಡಿ ಪ್ರವೇಶ ಮಾಡುವ ಮುನ್ನವೇ ನಿಯಂತ್ರಣ ಮಾಡಬೇಕು. ವಾಹನಗಳಲ್ಲಿಯೇ ತಡೆಯಬೇಕು ಎಂದರು. ಆಗ ಸಚಿವರು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

SCROLL FOR NEXT