ರಾಜ್ಯ

ಮಹಿಳೆ ಬೆತ್ತಲೆ ಪ್ರಕರಣ: ಸಂತ್ರಸ್ತೆಯ ವಿಡಿಯೋ, ಫೋಟೋ ಪ್ರಸಾರ ಮಾಡದಂತೆ ಹೈಕೋರ್ಟ್ ಆದೇಶ

Lingaraj Badiger

ಬೆಂಗಳೂರು: ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಪ್ರಕರಣದ ಸಂತ್ರಸ್ತೆಯ ಗುರುತು ಪತ್ತೆಯಾಗುವಂತೆ ವರದಿ ಮಾಡಿದ ಮಾಧ್ಯಮಗಳ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್, ಸಂತ್ರಸ್ತೆಯ ವಿಡಿಯೋ ಅಥವಾ ಫೋಟೋ ಪ್ರಸಾರ ಮಾಡದಂತೆ ಮಂಗಳವಾರ ಆದೇಶಿಸಿದೆ.

ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ಬಗ್ಗೆ ಮಾಧ್ಯಮಗಳ ವರದಿಗಳನ್ನು ಗಮನಿಸಿದ ಹೈಕೋರ್ಟ್, ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ ಮತ್ತು ಘಟನೆಗೆ ಸಂಬಂಧಿಸಿದ ಯಾವುದೇ ವೀಡಿಯೊಗಳನ್ನು ಪ್ರಸಾರ ಮಾಡದಂತೆ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಆದೇಶಿಸಿದೆ.

ಘಟನೆಯ ಸ್ಥಿತಿಗತಿ ವರದಿಯನ್ನು ಡಿಸೆಂಬರ್ 14 ರಂದು ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಅವರಿಗೆ ಹೈಕೋರ್ಟ್ ಸೂಚಿಸಿದೆ.

ಗೃಹ ಸಚಿವರು ಸಂತ್ರಸ್ತೆಯನ್ನು ಭೇಟಿಯಾದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಫೋಟೋದಲ್ಲಿ ಸಂತ್ರಸ್ತೆಯ ಗುರುತು ಸಿಗುವಂತೆ ಇದೆ. ಇದು ಮಾಧ್ಯಮದವರ ಅತ್ಯಂತ ಬೇಜವಾಬ್ದಾರಿ ಮತ್ತು ಸಂವೇದನಾರಹಿತವರ್ತನೆ ಹೈಕೋರ್ಟ್ ಕಿಡಿ ಕಾರಿದೆ.

"ಯಾವುದೇ ಮಾಧ್ಯಮ ಸಂಸ್ಥೆ ಅಥವಾ ಅದರ ಪ್ರತಿನಿಧಿಗಳು ಗೌರವಾನ್ವಿತ ಸಚಿವರ ಭೇಟಿಯ ಸಮಯದಲ್ಲಿ ಸಂತ್ರಸ್ತೆಯ ವೀಡಿಯೊಗ್ರಾಫ್ ಮಾಡಿದ್ದರೆ ಅಥವಾ ಸಂತ್ರಸ್ತೆಯ ಯಾವುದೇ ಸಂವಾದವನ್ನು ಹೊಂದಿದ್ದರೆ, ಅಂತಹ ಸಂದರ್ಶನ ಅಥವಾ ಸಂವಾದವನ್ನು ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ವಾಹಿನಿಗಳಲ್ಲಿ ಪ್ರಸಾರ ಮಾಡದಂತೆ ಈ ನ್ಯಾಯಾಲಯ ನಿರ್ದೇಶಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ನೇತೃತ್ವದ ವಿಭಾಗೀಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಿದ್ಯುನ್ಮಾನ ಮಾಧ್ಯಮದಲ್ಲಿ ಈಗಾಗಲೇ ಅಂತಹ ಸಂದರ್ಶನವನ್ನು ಪ್ರದರ್ಶಿಸಿದರೆ ಅಥವಾ ಪ್ರಸಾರ ಮಾಡಿದರೆ, ಇನ್ನು ಮುಂದೆ ಯಾವುದೇ ಪ್ರದರ್ಶನ ಅಥವಾ ಪ್ರಸಾರ ಮಾಡಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

SCROLL FOR NEXT