ರಾಜ್ಯ

ಸಂಸತ್ ಭದ್ರತಾ ಲೋಪ: ನನ್ನ ಮಗ ಪ್ರಾಮಾಣಿಕ, ವಿವೇಕಾನಂದರ ಅನುಯಾಯಿ; ದುಷ್ಕರ್ಮಿ ಮನೋರಂಜನ್ ತಂದೆ

Vishwanath S

ನವದೆಹಲಿ: ಸಂಸತ್ ದಾಳಿಯ 22ನೇ ವಾರ್ಷಿಕೋತ್ಸವದಂದೆ ಲೋಕಸಭೆಯಲ್ಲಿ ಪ್ರಮುಖ ಭದ್ರತಾ ಲೋಪ ನಡೆದಿದ್ದು ಇಬ್ಬರು ದುಷ್ಕರ್ಮಿಗಳು ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಹಳದಿ ಬಣ್ಣದ ಸ್ಪೈಯನ್ನು ಸಿಂಪಡಿಸಿದ್ದು ಇದು ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ಈ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಪುರುಷ ಮತ್ತು ಮಹಿಳೆ ಇಬ್ಬರನ್ನೂ ಸಂಸತ್ ಭವನದ ಮುಂದೆ ಬಂಧಿಸಿದ್ದರೆ ಮತ್ತಿಬ್ಬರು ಸಂಸತ್ತಿನ ಒಳಗೆ ಬಂಧಿಸಲಾಗಿದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ನವದೆಹಲಿ) ಪ್ರಣವ್ ತಾಯಲ್ ಖಚಿತಪಡಿಸಿದ್ದಾರೆ.

ಸಂಸತ್ತಿನ ಹೊರಗೆ ಬಂಧಿಸಿದವರನ್ನು ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಣೆ ನಡೆಸಿದ್ದು ಅವರು ಹರಿಯಾಣದ ಹಿಸಾರ್ ನಿವಾಸಿ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್ ನಿವಾಸಿ ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ. ಮತ್ತಿಬ್ಬರನ್ನು ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂದು ತಿಳಿದುಬಂದಿದೆ.

ಇನ್ನು ಸಂಸತ್ ಒಳಗೆ ದುಷ್ಕೃತ್ಯ ನಡೆಸಿದವರನ್ನು ಮೈಸೂರಿನವರು ಎಂದು ತಿಳಿದುಬಂದಿದೆ. ದುಷ್ಕರ್ಮಿಗಳು ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಗಳನ್ನು ತೆಗೆದುಕೊಂಡು ಬಂದಿದ್ದರು. ಈ ಪೈಕಿ ಮನೋರಂಜನ್ ಎಂಬಾತನ ತಂದೆ ದೇವರಾಜೇಗೌಡ ಅವರು ಪ್ರತಿಕ್ರಿಯಿಸಿದ್ದು ನನ್ನ ಮಗ ಮೈಸೂರು ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಆತ 'ಸಮಾಜದ ಕೆಡುಕುಗಳ' ವಿರುದ್ಧ ಹೋರಾಡಲು ಬಯಸಿದ್ದನು ಎಂದು ಹೇಳಿದ್ದಾರೆ.

ನನ್ನ ಮಗ ಒಳ್ಳೆಯ ಮತ್ತು ಪ್ರಾಮಾಣಿಕ ಹುಡುಗ. ಅವನು ಯಾವಾಗಲೂ ಸಮಾಜಕ್ಕಾಗಿ ಕೆಲಸ ಮಾಡಲು ಬಯಸುತ್ತಾನೆ. ಅವನು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದುತ್ತಾನೆ. ಅದು ಅವನ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ದೇವರಾಜಗೌಡ ಹೇಳಿದರು.

ಇದೇ ವೇಳೆ ನನ್ನ ಮಗ ತಪ್ಪ ಮಾಡಿದ್ದರೆ ಆತನನ್ನು ಗಲ್ಲಿಗೇರಿಸಿ. ಮಕ್ಕಳ ಜೀವನ ಚೆನ್ನಾಗಿರಲಿ ಎಂದು ವಿದ್ಯಾಭ್ಯಾಸ ಕೊಡಿಸಿದ್ದೆ. ಆದರೆ ಮಗ ಈ ರೀತಿ ಮಾಡಿದ್ದಾನೆ ಎಂದು ದೇವರಾಜಗೌಡ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

SCROLL FOR NEXT