ರಾಜ್ಯ

ಮಹಿಳೆಯರ ಮೇಲಿನ ಅಪರಾಧ ಹೆಚ್ಚಳ; ಆದರೂ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ನೇಮಕಕ್ಕೆ ಇನ್ನೂ ಮೀನಾಮೇಷ!

Nagaraja AB

ಬೆಂಗಳೂರು: ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಳವಾಗಿದ್ದರೂ ಶಾಸನಬದ್ಧ ಹಾಗೂ ಅರೆ ನ್ಯಾಯಾಂಗ ಸಂಸ್ಥೆಯಾಗಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಇನ್ನೂ ನೇಮಕವಾಗಿಲ್ಲ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡ ಸಂತ್ರಸ್ತೆಯನ್ನು ಭೇಟಿ ಮಾಡಿದ್ದು, ರಾಜ್ಯ ಹೈಕೋರ್ಟ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದರೂ, ರಾಜ್ಯ ಮಹಿಳಾ ಆಯೋಗ ಅಧ್ಯಕ್ಷರಿಲ್ಲದ ಕಾರಣ ಮೌನವಾಗಿದೆ.

ಇತ್ತೀಚಿಗೆ ಹೆಣ್ಣು ಭ್ರೂಣ ಹತ್ಯೆ ಮತ್ತು ಬೆಳಗಾವಿ ಘಟನೆಗಳು ಸೇರಿದಂತೆ ಮಹಿಳೆಯರ ವಿರುದ್ಧ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿದಿನ, ಕೌಟುಂಬಿಕ ದೌರ್ಜನ್ಯ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಅಥವಾ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಮಹಿಳೆಯರು ಆಯೋಗದ ಕಚೇರಿಗೆ ಬರುತ್ತಾರೆ, ಆದರೆ ಯಾವುದೇ ಭರವಸೆಯಿಲ್ಲದೆ ಹಿಂತಿರುಗುತ್ತಿದ್ದಾರೆ. ಇಂತಹ ಮಹತ್ವದ ಸಂಸ್ಥೆಗೆ ಅಧ್ಯಕ್ಷರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ವಿಳಂಬ ಮಾಡಬಾರದಿತ್ತು' ಎಂದು ಹೆಸರು ಹೇಳಲು ಇಚ್ಚಿಸದ  ಮಹಿಳಾ ಮತ್ತು ಮಕ್ಕಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 

 ಇಮೇಲ್‌ಗಳು, ಫೋನ್ ಕರೆಗಳು ಮತ್ತು ಪತ್ರಗಳ ಮೂಲಕ ರಾಜ್ಯದಾದ್ಯಂತ ಸುಮಾರು 20 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಆಯೋಗದ ಕಚೇರಿಗೂ ಕೆಲವರು ಭೇಟಿ ನೀಡುತ್ತಿದ್ದಾರೆ. ಆದರೆ ಮುಖ್ಯಾಧಿಕಾರಿ ಇಲ್ಲದ ಕಾರಣ ಆಯೋಗದ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಹಾಜರಾಗುತ್ತಾರೆ ಎಂದು  ಈ ವರ್ಷದ ಮೇನಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೂ ಅಧ್ಯಕ್ಷೆಯಾಗಿದ್ದ ಪ್ರಮೀಳಾ ನಾಯ್ಡು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಆಯೋಗವು ಜವಾಬ್ದಾರಿಯುತ ಪಾತ್ರವನ್ನು ಹೊಂದಿದೆ. ಹಿಂದಿನ ಅಧ್ಯಕ್ಷರನ್ನು ತೆಗೆದುಹಾಕುವ ಮೊದಲು ರಾಜ್ಯ ಸರ್ಕಾರ ಅಧ್ಯಕ್ಷರ ಹೆಸರನ್ನು ಸೂಚಿಸಬೇಕಿತ್ತು. ಆಯೋಗಕ್ಕೆ ಪೂರ್ಣಾವಧಿ ಅಧ್ಯಕ್ಷರ ಅಗತ್ಯವಿದೆ. ಒಬ್ಬ ಕಾರ್ಯದರ್ಶಿ ಇದ್ದಾರೆ, ಅವರು ಹೆಚ್ಚಾಗಿ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು. 

ಆಯೋಗವು 1996 ರಲ್ಲಿ ಪ್ರಾರಂಭವಾದಾಗಿನಿಂದ, ಒಟ್ಟು 16 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಎಂಟು ಅಧ್ಯಕ್ಷರನ್ನು ಮಾತ್ರ ಹೊಂದಿದೆ. ಇನ್ನುಳಿದ 11 ವರ್ಷಗಳ ಕಾಲ ಅದು ಮುಖ್ಯಸ್ಥರಿಲ್ಲದೆ ಅಥವಾ ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಕಳೆದ 27 ವರ್ಷಗಳಲ್ಲಿ 12 ಐಎಎಸ್ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅವರಲ್ಲಿ ಆರು ಮಂದಿ 12 ತಿಂಗಳು ಸೇವೆ ಸಲ್ಲಿಸಿದ್ದಾರೆ. ಒಬ್ಬರು ಅಧ್ಯಕ್ಷರಾಗಿ ಪೂರ್ಣಾವಧಿ ಪೂರ್ಣಗೊಳಿಸಿದ್ದಾರೆ.

SCROLL FOR NEXT