ಬೆಂಗಳೂರು: ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆಯ ಹಿನ್ನೆಲೆಯಲ್ಲಿ ನಗರದಿಂದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ತೆರಳುವ ಜನರಿಂದ ಶನಿವಾರ ಬೆಂಗಳೂರು-ಮೈಸೂರು ರಸ್ತೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮತ್ತು ಹೊಸೂರು ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ವಾಹನ ಸವಾರರು ಹಲವು ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕಿಕೊಂಡರು.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ನೂರಾರು ವಾಹನ ಸವಾರರು ಹಲವು ಗಂಟೆಗಳ ಕಾಲ ಸಿಲುಕಿಕೊಂಡರು. ಮುಂಜಾನೆಯೇ ಮನೆ ಬಿಟ್ಟರೂ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿರುವುದಾಗಿ ಪ್ರಯಾಣಿಕರು ಹೇಳಿದರು. ಕೆಂಗೇರಿ ತಲುಪುತ್ತಿದ್ದಂತೆ, ಹೆದ್ದಾರಿಯಲ್ಲಿ ನೂರಾರು ಕಾರುಗಳು ಮತ್ತು ಇತರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ ಪ್ರವೇಶಿಸುವವರೆಗೂ ತುಂಬಾ ಸಮಯ ಹಿಡಿಯಿತು ಎಂದು ಮೈಸೂರಿಗೆ ಹೊರಟ ಪ್ರಶಾಂತ್ ಹೇಳಿದರು.
ಸೋಮವಾರದಿಂದ ಕ್ರಿಸ್ಮಸ್ ರಜೆ ಇರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಅನೇಕರು ತಮ್ಮ ಫಾಸ್ ಟ್ಯಾಗ್ ರೀಚಾರ್ಜ್ ಮಾಡಿಲ್ಲ ಮತ್ತು ಟೋಲ್ ಶುಲ್ಕವನ್ನು ದುಪ್ಪಟ್ಟು ಪಾವತಿಸುವಂತೆ ಕೇಳಲಾಯಿತು. ಇದು ಟ್ರಾಫಿಕ್ ಜಾಮ್ಗೆ ಮತ್ತೊಂದು ಕಾರಣವಾಗಿತ್ತು. ವಾಹನ ಚಾಲಕರು ತಮ್ಮ ಪ್ರಯಾಣ ಪ್ರಾರಂಭಿಸುವ ಮೊದಲು ತಮ್ಮ ಫಾಸ್ ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸದ ಕಾರಣ ಇದು ಸಾಮಾನ್ಯವಾಗಿ ಸಂಭವಿಸುತ್ತದೆ ಎಂದು ಅವರು ಹೇಳಿದರು.
ಹೊಸೂರು ರಸ್ತೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಾಗಿ ಅನೇಕರು ಹೊಸೂರು ರಸ್ತೆಯ ಮೂಲಕ ಕೇರಳದ ಕಡೆಗೆ ತೆರಳಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಬೆಂಗಳೂರಿನ ಹಲವು ಕಾರ್ಪೊರೇಟ್ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಟೆಕ್ಕಿ ಬಾಲಚಂದರ್ ತಿಳಿಸಿದರು.
ಬಳ್ಳಾರಿ ರಸ್ತೆಯಲ್ಲಿ ಭಾರೀ ದಟ್ಟಣೆಯಿಂದಾಗಿ ಅನೇಕ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ತುಂಬಾ ಸಮಯ ಬೇಕಾಯಿತು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೆ ರಜೆ ಇರುವುದರಿಂದ ಟ್ರಾಫಿಕ್ ಜಾಮ್ ಆಗಿದೆ ಎಂದು ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ತಿಳಿಸಿದರು.