ರಾಜ್ಯ

ಕೊಚ್ಚಾಡಿಯನ್ ವಂಚನೆ ಪ್ರಕರಣ: ರಜನಿಕಾಂತ್ ಪತ್ನಿ ಬೆಂಗಳೂರಿನ ಕೋರ್ಟಿಗೆ ಹಾಜರ್, ಜಾಮೀನು ಮಂಜೂರು

Lingaraj Badiger

ಬೆಂಗಳೂರು: ಕೊಚಾಡಿಯನ್ ಚಿತ್ರದ ವಿತರಕರಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರು ಮಂಗಳವಾರ ಬೆಂಗಳೂರಿನ ಕೋರ್ಟ್ ಗೆ ಖುದ್ದು ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.

ವಂಚನೆ ಪ್ರಕರಣ ಸಂಬಂಧ 2024 ಜನವರಿ 6ರ ಒಳಗೆ ಖುದ್ದಾಗಿ ಕೋರ್ಟಿಗೆ ಹಾಜರಾಗಬೇಕು ಎಂದು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಲತಾ ರಜಿನಿಕಾಂತ್ ಅವರಿಗೆ ಸೂಚಿಸಿತ್ತು. ಅದರಂತೆ ಇಂದು ಖುದ್ದಾಗಿ ಲತಾ ಅವರು ಬೆಂಗಳೂರಿನ ಕೋರ್ಟಿಗೆ ಹಾಜರಾಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ಆರೋಪಿ ಲತಾ ಅವರಿಗೆ ಜಾಮೀನು ಮಂಜೂರು ಮಾಡಿದೆ. ಎರಡು ವೈಯಕ್ತಿಕ ಬಾಂಡ್ ನೀಡುವಂತೆ ಲತಾ ಅವರಿಗೆ ಕೋರ್ಟ್ ಸೂಚನೆ ನೀಡಿದೆ.

ಆ್ಯಡ್ ಬ್ಯೂರೋ ಏಜೆನ್ಸಿ ಲತಾ ವಿರುದ್ಧ ಕೇಸ್ ದಾಖಲಿಸಿದ್ದು, ಕೊಚಾಡಿಯನ್ ಚಿತ್ರಕ್ಕಾಗಿ 6.2 ಕೋಟಿ ರೂ. ಸಾಲ ಪಡೆದು ಹಿಂದಿರುಗಿಸಿಲ್ಲ ಮತ್ತು ನಕಲಿ ಲೆಟರ್ ಹೆಡ್ ನೀಡಿದ್ದಾರೆ ಎಂದು ಅಬಿರ್ ಚಂದ್ ನವಾಹರ್ ಎಂಬುವವರು ದೂರು ನೀಡಿದ್ದರು.

SCROLL FOR NEXT