ರಾಜ್ಯ

ಕನ್ನಡಪರ ಹೋರಾಟಗಾರರ ಬಗ್ಗೆ ಗೌರವ ಇದೆ, ಸಾರ್ವಜನಿಕ ಆಸ್ತಿ ಹಾನಿ ಮಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ: ಡಿ ಕೆ ಶಿವಕುಮಾರ್

Sumana Upadhyaya

ಬೆಂಗಳೂರು: ನಮಗೆ ಕನ್ನಡಪರ ಹೋರಾಟಗಾರರ ಬಗ್ಗೆ ಗೌರವ ಇದೆ. ಕನ್ನಡದ ಹೆಸರಿನಲ್ಲಿ ಹೋರಾಟಗಾರರು ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಮಾಡಿದರೆ ನೋಡಿಕೊಂಡು ಸರ್ಕಾರ ಕಣ್ಣುಮುಚ್ಚಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.

ಸರ್ಕಾರ ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ನಾವು ಕನ್ನಡಪರ ಹೋರಾಟ ಮಾಡುವವರಿಗೆ ನಮ್ಮದು ಅಭ್ಯಂತರವಿಲ್ಲ. ಆದರೆ ಕಾನೂನು ಕೈಗೆತ್ತಿಕೊಳ್ಳಬಾರದು, ಬೆಂಗಳೂರು ನಗರದ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವುದನ್ನು ಒಪ್ಪಲು ತಯಾರಿಲ್ಲ ಎಂದರು.

ಕರ್ನಾಟಕದಲ್ಲಿ ಶೇಕಡಾ 60ರಷ್ಟು ಕನ್ನಡದಲ್ಲಿ ಬೋರ್ಡ್ ಹಾಕಬೇಕೆಂಬ ನಿಯಮವನ್ನು ಒಪ್ಪಿಕೊಳ್ಳೋಣ, ಹೋರಾಟ ಮಾಡುವುದಕ್ಕೆ ಇತಿಮಿತಿ ಇದೆ. ಕನ್ನಡ ಕಡ್ಡಾಯ ಮಾಡಲು ನೊಟೀಸ್ ಜಾರಿ ಮಾಡುತ್ತೇವೆ.ನಾರಾಯಣ ಗೌಡರಿಗೆ ನಾನು ಇದನ್ನೇ ಹೇಳುತ್ತೇನೆ, ಯಾರ ಆಸ್ತಿಯನ್ನೂ ನಾಶ ಮಾಡಬಾರದು. ನಮ್ಮ ಮನೆಯ ಮುಂದೆ ಬಂದು ಕೂಡ ಧಿಕ್ಕಾರ ಮಾಡಲಿ, ಮುಖ್ಯಮಂತ್ರಿಗಳು ಕೂಡ ಹೇಳಿದ್ದಾರೆ, ಸಂಪುಟ ಸಭೆಯಲ್ಲಿ ಕೂಡ ತೀರ್ಮಾನವಾಗಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಕರ್ನಾಟಕ ರಕ್ಷಣಾ ಹೋರಾಟಗಾರರಾಗಲಿ, ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡು ಹೋರಾಟ ಮಾಡಲು ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರು.

SCROLL FOR NEXT