ರಾಜ್ಯ

ಮತದಾರರಿಗೆ ಉಚಿತ ಉಡುಗೊರೆ, ಹಣದ ಆಮಿಷ: ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗ ಸೂಚನೆ

Manjula VN

ಬೆಂಗಳೂರು: ಚುನಾವಣೆ ಹತ್ತಿರಬರುತ್ತಿದ್ದು, ರಾಜಕೀಯ ಪಕ್ಷಗಳು ಜನಸಾಮಾನ್ಯರಿಗೆ ವಿವಿಧ ರೀತಿಯ ಉಚಿತ ಉಡುಗೊರೆ, ಆಮಿಷಗಳನ್ನು ಒಡ್ಡುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ನಿಯಮಗಳಂತೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆಗಳ ಕುರಿತು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ನೇತೃತ್ವದಲ್ಲಿ ಬುಧವಾರ ಸಭೆ ನಡೆದಿದ್ದು, ಸಭೆಯಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಮನೋಜ್ ಕುಮಾರ್ ಮೀನಾ ಅವರು, ಮತದಾರರಿಗೆ ಮದ್ಯಪಾನ ಸೇರಿದಂತೆ ವಿವಿಧ ರೀತಿಯ ಉಡುಗೊರೆಗಳನ್ನು ಕೂಪನ್‍ಗಳ ಮೂಲಕ ವಿತರಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಕಳೆದ ವರ್ಷದ ಈ ಸಮಯದಲ್ಲಿ ಮಾರಾಟವಾದ ಮದ್ಯ ಹಾಗೂ ಪ್ರಸ್ತುತ ಈಗ ಮಾರಾಟವಾಗುತ್ತಿರುವ ಮದ್ಯ ಕುರಿತಂತೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ವಿವಿಧೆಡೆ ಅಂತರ ರಾಜ್ಯ ಚೆಕ್  ಪೋಸ್ಟ್ ಗಳನ್ನು ತೆರೆಯುವಂತೆ ಸೂಚಿಸಿದರು.

ಸಮಾಜದಲ್ಲಿ ನಡೆಯುತ್ತಿರುವ ಆಮಿಷಗಳ ಕುರಿತಂತೆ ಸಂಬಂಧಿತ ಇಲಾಖೆಗಳು ತಮ್ಮಲ್ಲಿರುವ ಮಾಹಿತಿಯನ್ನು ಅಂತರ ಇಲಾಖಾ ಮಟ್ಟದಲ್ಲಿ ಹಂಚಿಕೊಳ್ಳುವ ಮೂಲಕ ಸುಗಮ ಚುನಾವಣೆಗೆ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು. ವಿವಿಧ ಇಲಾಖೆಗಳ ಮೂಲಕ ಸ್ವೀಕರಿಸಲಾಗುವ ನೋಂದಾಯಿತ ಪ್ರಕರಣಗಳ ಕುರಿತು ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಹಣ ಮತ್ತು ಬಂಗಾರದಂತಹ ಬೆಲೆ ಬಾಳುವ ವಸ್ತುಗಳು ಮತ್ತು ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟದ ಮೇಲೆ ಕಣ್ಣಿಡಬೇಕು. ಇದಕ್ಕೆ ಸಂಬಂಧಿಸಿದಂತೆ ರೈಲು, ಬಂದರು ಹಾಗೂ ವಿಮಾನ ನಿಲ್ದಾಣಗಳಲ್ಲಿ ವಿಶೇಷ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಹೇಳಿದರು.

ಹಣದ ರೂಪದಲ್ಲಿ ಮತ್ತು ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳ ಮೂಲಕ ನಡೆಯುವ ಚಲಾವಣೆಗಳ ಮೇಲೆ ಹೆಚ್ಚಿನ ಎಚ್ಚರ ವಹಿಸಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಸಮಾಜಘಾತುಕ ಭಾಷಣ, ಸಮಾಜದ ನೆಮ್ಮದಿ ಕದಡುವ ಹಾಗೂ ದ್ವೇಷವನ್ನು ಹರಡುವ ಮಾತುಗಳು ಮತ್ತು ಅಂತಹ ಸಭೆಗಳ ಮೇಲೆ ಕಟ್ಟೆಚ್ಚರ ವಹಿಸಬೇಕು. ಆ ರೀತಿಯ ಘಟನೆಗಳು ಕಂಡು ಬಂದಲ್ಲಿ ಆಯಾ ವ್ಯಾಪ್ತಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

SCROLL FOR NEXT