ರಾಜ್ಯ

ರಾಜ್ಯದ ಪ್ರತಿ ಜಿಲ್ಲೆಯಲ್ಲಿ 'ಯುನಿಟಿ ಮಾಲ್‌'ಗಳ ಸ್ಥಾಪನೆ; ಕಲೆ, ಕರಕುಶಲ ವಸ್ತುಗಳ ಪ್ರದರ್ಶನ

Manjula VN

ಬೆಂಗಳೂರು: ಪ್ರವಾಸೋದ್ಯಮ ಮತ್ತು ಅದಕ್ಕೆ ಸಂಬಂಧಿಸಿದ ಅಂಶಗಳನ್ನು ಮಾಲ್‌ಗಳ ಮೂಲಕ ಉತ್ತೇಜಿಸಲು ಕೇಂದ್ರ ಸರ್ಕಾರ ಹೊಸ ವಿಧಾನವನ್ನು ರೂಪಿಸುತ್ತಿದ್ದು, ನಿನ್ನೆಯಷ್ಟೇ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್'ನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ರಾಜ್ಯಗಳಲ್ಲು ಯೂನಿಟಿ ಮಾಲ್'ಗಳ ಸ್ಥಾಪಿಸುವುದಾಗಿ ಘೋಷಿಸಿದರು.

ಪ್ರವಾಸೋದ್ಯಮ ಪ್ರಚಾರವನ್ನು ರಾಜ್ಯಗಳ ಸಕ್ರಿಯ ಭಾಗವಹಿಸುವಿಕೆ, ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ 'ಮಿಷನ್ ಮೋಡ್'ನಲ್ಲಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು,

ದೇಶವು ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ 'ಅಗಾಧ ಆಕರ್ಷಣೆ' ನೀಡುತ್ತದೆ. ಪ್ರವಾಸೋದ್ಯಮದಲ್ಲಿ ಹೆಚ್ಚಿನ ಅವಕಾಶವಿದೆ. ಈ ವಲಯವು ವಿಶೇಷವಾಗಿ ಯುವಕರಿಗೆ ಉದ್ಯೋಗಗಳು ಮತ್ತು ಉದ್ಯಮಶೀಲತೆಗೆ ದೊಡ್ಡ ಅವಕಾಶಗಳನ್ನು ಹೊಂದಿದೆ. 'ರಾಜ್ಯಗಳ ಸಕ್ರಿಯ ಭಾಗವಹಿಸುವಿಕೆ, ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮಿಷನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಈ ಘೋಷಣೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಕೇಂದ್ರದ ಉದ್ದೇಶಿತ ಯೂನಿಟಿ ಮಾಲ್‌ಗಳು ಪ್ರತಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಮತ್ತು ಇತರ ಜಿಐ ಟ್ಯಾಗ್ ಉತ್ಪನ್ನಗಳನ್ನು ಪ್ರದರ್ಶಿಸುವ ಮಾಲ್ ರೀತಿಯ ಮಳಿಗೆಗಳಾಗಿ ಇರಲಿವೆ. ಈಗಾಗಲೇ ಕೆಲವು ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುವ 'ಒಂದು ಜಿಲ್ಲೆ, ಒಂದು ತಾಣ' ಪ್ರಚಾರದ ಮಾದರಿಯಲ್ಲಿ ಅವು ಇರುತ್ತವೆ ಎಂದು ಹೇಳಿದ್ದಾರೆ.

ಯೂನಿಟಿ ಮಾಲ್‌ಗಳು ಹೆಚ್ಚಿನ ಕೊಡುಗೆಯನ್ನು ಹೊಂದಿರುತ್ತವೆ. ಬೆಂಗಳೂರಿನಂತಹ ನಗರ ಜಿಲ್ಲೆಗಳಲ್ಲಿ ಪ್ರದರ್ಶನಕ್ಕೆ ಹೆಚ್ಚೇನೂ ಇಲ್ಲದಿದ್ದಾಗ ಈ ಮಾಲ್ ಗಳ ಮೂಲಕ ಇಡೀ ರಾಜ್ಯವನ್ನು ಪ್ರದರ್ಶಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೆಚ್ಚೆಚ್ಚು ಪ್ರವಾಸಿ ತಾಣಗಳ ಮೂಲಕ ಹೆಚ್ಚೆಚ್ಚು ಪ್ರವಾಸಿಗರ ಸೆಳೆಯುವ ಕುರಿತು ಮಾತನಾಡಿರುವ ಅಧಿಕಾರಿಗಳು, ಪಶ್ಚಿಮ ಕರಾವಳಿಯನ್ನು ಉತ್ತೇಜಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಗೋವಾದಲ್ಲಿ ಈಗಾಗಲೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಇದೀಗ ಕಾರವಾರದಿಂದ ಮಂಗಳೂರಿಗೆ ಗಮ್ಯಸ್ಥಾನಗಳ ಉತ್ತೇಜಿಸುವತ್ತ ಗಮನ ಹರಿಸಲಾಗುತ್ತಿದೆ. ಕಾರವಾರದಲ್ಲಿ ಜಲ ಕ್ರೀಡೆ, ಮನರಂಜನೆಯೊಂದಿಗೆ ಹೆಲಿ ಪ್ರವಾಸೋದ್ಯಮ ಸ್ಥಾಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ದೇಶೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದತ್ತ ಹೆಚ್ಚೆಚ್ಚು ಪ್ರವಾಸಿಗರ ಸೆಳೆಯುವ ಕುರಿತು ಮಾತನಾಡಿ, ಐಕಾನಿಕ್ ತಾಣಗಳ ಪಟ್ಟಿಗೆ ಪ್ರತೀ ವರ್ಷ ಎರಡು ತಾಣಗಳ ಸೇರಿಸುವ ಕೆಲಸವಾಗುತ್ತಿದೆ. ಈ ವರ್ಷ ಪಟ್ಟಿಗೆ ಹಂಪಿ ಮತ್ತು ಮೈಸೂರನ್ನು ಸೇರಿಸಲಾಗಿದೆ. ಇಲಾಖೆಯು ಕರಾವಳಿ ಮತ್ತು ಪರಂಪರೆ ಎಂಬ ವಿಷಯಗಳತ್ತ ಕಾರ್ಯನಿರ್ವಹಿಸುತ್ತಿದೆ. ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಪ್ರವಾಸಿಗರಿಗೆ ಸೌಲಭ್ಯ ಒದಗಿಸುವುದು ಮುಖ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಘೋಷಣೆ ಜೊತೆಗೆ ರಾಜ್ಯ ಸರ್ಕಾರದ ಕೆಲಸಗಳು ಕೂಡ ನಿರ್ಣಾಯಕವಾಗಿರುತ್ತದೆ ಎಂದಿದ್ದಾರೆ.

SCROLL FOR NEXT