ರಾಜ್ಯ

ಸಾಫ್ಟ್‌ವೇರ್ ಉದ್ಯೋಗದ ನೆಪದಲ್ಲಿ ಸಂದರ್ಶನಕ್ಕೆ ಕರೆದು ವ್ಯಕ್ತಿಯ ಅಪಹರಿಸಿ ದರೋಡೆ ಮಾಡಿದ್ದ ನಾಲ್ವರ ಬಂಧನ

Ramyashree GN

ಬೆಂಗಳೂರು: ಸಾಫ್ಟ್‌ವೇರ್ ಉದ್ಯೋಗದ ನೆಪದಲ್ಲಿ ಆಂಧ್ರಪ್ರದೇಶದ ಯುವಕನನ್ನು ಸಂದರ್ಶನಕ್ಕೆಂದು ನಗರಕ್ಕೆ ಬರುವಂತೆ ಮಾಡಿ ಬಳಿಕ ಆತನನ್ನು ಅಪಹರಿಸಿ ದರೋಡೆ ಮಾಡಿದ್ದ ನಾಲ್ವರು ದರೋಡೆಕೋರರ ತಂಡವನ್ನು ಬಂಧಿಸಲಾಗಿದೆ. 

ಸಾಫ್ಟ್‌ವೇರ್ ಕಂಪನಿಗಳ ಸಿಇಒ ಎಂದು ಬಿಂಬಿಸಿಕೊಳ್ಳುತ್ತಿದ್ದ ಆರೋಪಿಗಳು ನಕಲಿ ಜಾಬ್ ಪೋರ್ಟಲ್‌ಗಳನ್ನು ಸೃಷ್ಟಿಸಿ ಉದ್ಯೋಗ ಆಕಾಂಕ್ಷಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು.

ಸಂತ್ರಸ್ತರು ಉದ್ಯೋಗ ಪಡೆಯಲು ಬಂದಾಗ, ಅವರನ್ನು ಅಪಹರಿಸಿ ದರೋಡೆ ಮಾಡಲಾಗುತ್ತಿತ್ತು. ಬಂಧಿತರನ್ನು ಮಲ್ಲು ಶಿವಶಂಕರ್ ರೆಡ್ಡಿ ಅಲಿಯಾಸ್ ಗೋಪಿಚಂದ್ (26), ಗುಂಜ ಮಂಗರಾವ್ (35), ಶೇಖ್ ಶಹಬಾಷಿ (30) ಹಾಗೂ ಮಹೇಶ್ ಕೊಟ್ಟಯ್ಯ (21)ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ 5.95 ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಂತ್ರಸ್ತನನ್ನು ಪ್ರದೀಪ್ ಅಸಂವರ್ ಎಂದು ಗುರುತಿಸಲಾಗಿದ್ದು, ಸಿಎಸ್‌ಎಸ್ ಗ್ರೂಪ್‌ ಕಂಪನಿಯಲ್ಲಿ ಹುದ್ದೆಗಳು ಖಾಲಿ ಇವೆ. ಸಂದರ್ಶನಕ್ಕೆ ಬನ್ನಿ ಎಂದು ಆರೋಪಿಗಳು ಸಂದೇಶ ಕಳುಹಿಸಿದ್ದರು. ಅದನ್ನು ನಂಬಿದ್ದ ಪ್ರದೀಪ್, ಜನವರಿ 11 ರಂದು ಸಂದರ್ಶನಕ್ಕೆ ಬಂದಿದ್ದಾಗ ಆರೋಪಿಗಳು ಆತನನ್ನು ಕಾರಿನಲ್ಲಿ ಕರೆದೊಯ್ದು, ಬೆದರಿಕೆಯೊಡ್ಡಿ 6.18 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದರು. ಬಳಿಕ ಅವರನ್ನು ಕಾರಿನಿಂದ ಇಳಿಸಿ ಪರಾರಿಯಾಗಿದ್ದರು. 

ಆರೋಪಿಗಳು ಸಂತ್ರಸ್ತನನ್ನು ಇತರೆ ಬ್ಯಾಂಕ್ ಖಾತೆಗಳಿಗೆ ಯುಪಿಐ ಪಾವತಿ ಮಾಡುವಂತೆ ಮಾಡಿದ್ದಾರೆ.

ಅಪಹರಣ ಹಾಗೂ ಸುಲಿಗೆ ಸಂಬಂಧ ಪ್ರದೀಪ್ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಸುಲಿಗೆ ಮಾಡಿದ್ದ ಹಣದಲ್ಲಿ ಸ್ವಲ್ಪ ಹಣವನ್ನು ಆರೋಪಿಗಳು ಖರ್ಚು ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

SCROLL FOR NEXT