ಬೆಂಗಳೂರು: ಪ್ರತಿದಿನ ಹಲವಾರು ಹೊಸ ಪ್ರಕರಣಗಳು ಮತ್ತು ವಂಚನೆಗಳು ಬೆಳಕಿಗೆ ಬರುತ್ತಿರುವುದು ಆಘಾತಕಾರಿ ಮತ್ತು ಕಳವಳಕಾರಿ ಸಂಗತಿಯಾಗಿದ್ದು, ಸೈಬರ್ ಅಪರಾಧಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಜನರು ಜಾಗರೂಕರಾಗಿರಬೇಕು ಎಂದು ಪೊಲೀಸ್ ಮಹಾನಿರ್ದೇಶಕ (ಸಿಐಡಿ) ಪಿ ಎಸ್ ಸಂಧು ಅವರು ಶನಿವಾರ ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್, ಹ್ಯಾಕ್2ಸ್ಕಿಲ್ ಮತ್ತು ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು (ಐಐಐಟಿ-ಬಿ) ಆಯೋಜಿಸಿದ್ದ 30 ಗಂಟೆಗಳ ಆಫ್ಲೈನ್ (ಹೈಬ್ರಿಡ್) ಪೊಲೀಸ್ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಸಂಧು ಅವರು ಮಾತನಾಡಿದರು.
ಸೈಬರ್ ಕ್ರೈಂ ಬಗ್ಗೆ ಜನರು ಜಾಗೃತರಾಗಿರಬೇಕು ಮತ್ತು ಪ್ರತಿಯೊಂದು ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಬಾರದು ಎಂದು ಹೇಳಿದರು.
ಹೆಚ್ಚು ತಾಂತ್ರಿಕ ಜ್ಞಾನ ಬಳಕೆ ಮಾಡುವ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಹಿರಿಯ ನಾಗರಿಕರು ಸೈಬರ್ ವಂಚನೆಗೆ ಹೆಚ್ಚು ಗುರಿಯಾಗುತ್ತಿದ್ದಾರೆಂದು ತಿಳಿಸಿದರು.
14,000 ಕ್ಕೂ ಹೆಚ್ಚು ಜನರು ಹ್ಯಾಕಥಾನ್ಗೆ ನೋಂದಾಯಿಸಿಕೊಂಡಿದ್ದು, ಅದರಲ್ಲಿ 166 ಮಂದಿ ಅಂತಿಮ ಸುತ್ತಿಗೆ ಆಯ್ಕೆಯಾದರು. ಇವರು ಏಕೀಕೃತ ಡೇಟಾ ಪರಿಶೀಲನೆ, ಕ್ರೌಡ್ ಸೋರ್ಸಿಂಗ್ ಆಫ್ ರೆಕಾರ್ಡ್, ಎಐ- ಫೇಸ್ ಡಿಟೆಕ್ಷನ್, ಬ್ಯಾಂಕ್ ಅಕೌಂಟ್ ಅನಾಲಸಿಸ್ ಮತ್ತು ಫ್ರಾಡ್ ಆ್ಯಪ್ ಡಿಕೆಕ್ಷನ್ ಎಂಬ ಐದು ಕ್ಷೇತ್ರಗಳಲ್ಲಿ ಭಾಗವಹಿಸಿದರು.
“ಹ್ಯಾಕಥಾನ್ನ ಐದು ವಿಭಿನ್ನ ಕ್ಷೇತ್ರಗಳು ಪೋಲೀಸ್ ಇಲಾಖೆಯ ಅವಶ್ಯಕತೆಗೆ ಅನುಗುಣವಾಗಿರುತ್ತವೆ ಮತ್ತು ಜಗತ್ತಿನಾದ್ಯಂತ ಪ್ರತಿಯೊಬ್ಬರೂ ಎದುರಿಸುತ್ತಿರುವ ಬಹು ಸವಾಲುಗಳಿಗೆ ಸಂಬಂಧಿಸಿದಂತೆ ಇದು ಬಹಳ ಸೂಕ್ತವಾಗಿದೆ. ಈ ಐದು ಕ್ಷೇತ್ರಗಳು ಐಐಐಟಿಬಿಯಲ್ಲಿನ ನಮ್ಮ ಸಂಶೋಧನೆ ಮತ್ತು ಬೋಧನೆಗೆ ಹತ್ತಿರವಾಗಿವೆ" ಎಂದು ಐಐಐಟಿಬಿಯ ನಿರ್ದೇಶಕ ಪ್ರೊ ದೇಬಬ್ರತ ದಾಸ್ ಹೇಳಿದರು.
ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾಗೂ 2022ರ ಆಗಸ್ಟ್ ತಿಂಗಳಿನಲ್ಲಿ ನಡೆದಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನಲ್ಲಿ ವಿಜೇತರಾಗಿದ್ದ ಸುಪ್ರೀತ್ ರಾವ್ ಅವರು ಮಾತನಾಡಿ, ಕ್ರೌಡ್ ಸೋರ್ಸಿಂಗ್ ಆಫ್ ರೆಕಾರ್ಡ್'ಗೆ ಪರಿಹಾರಗಳ ಕಂಡು ಹಿಡಿಯುವತ್ತ ನಮ್ಮ ತಂಡ ಕೆಲಸ ಮಾಡುತ್ತಿದೆ. ವಂಚನೆಗಳನ್ನು ಪತ್ತೆ ಹಚ್ಚುವುದು ಹಾಗೂ ಅವುಗಳಿಗೆ ಪರಿಹಾರ ಕಂಡುಹಿಡಿಯುವತ್ತ ಸೇತುವೆಯಾಗವುದರತ್ತ ನಾವು ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.