ರಾಜ್ಯ

ಕೊಪ್ಪಳ: ದಲಿತ ಮಹಿಳೆಗೆ ಚಪ್ಪಲಿಯಿಂದ ಹೊಡೆದ ಮೇಲ್ಜಾತಿ ಪುರುಷ, ಕೇಸು ದಾಖಲು

Sumana Upadhyaya

ಕೊಪ್ಪಳ: ತನ್ನ ಜಮೀನಿಗೆ ಜಾನುವಾರು ಬಂದು ಉಪಟಳ ಮಾಡಿದೆ ಎಂದು ಸಿಟ್ಟಿನಿಂದ 30 ವರ್ಷದ ದಲಿತ ಮಹಿಳೆಗೆ ಮೇಲ್ಜಾತಿಯ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ. 

ಮೊನ್ನೆ ಫೆಬ್ರವರಿ 3 ರಂದು ಕೊಪ್ಪಳ ಜಿಲ್ಲೆಯ ರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತ ಸಮುದಾಯಕ್ಕೆ ಸೇರಿದ ಸಂತ್ರಸ್ತೆ, ಆರೋಪಿ ಅಮರೇಶ್ ಕುಂಬಾರ್ ತನ್ನ ಮನೆಯ ಮುಂದೆ ಕಟ್ಟಿದ್ದ ಹಸುವನ್ನು ರಕ್ಷಿಸಲು ಹೋದಾಗ ಚಪ್ಪಲಿಯಿಂದ ಥಳಿಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. 

ಆರೋಪಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, 1989 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಮಹಿಳೆ ತನ್ನ ಹಸುವನ್ನು ಮರಳಿ ತರಲು ಅಮರೇಶ್ ಅವರ ಮನೆಗೆ ಹೋಗಿದ್ದರು. ಆಗ ಚಪ್ಪಲಿಯಿಂದ ಹೊಡೆದಿದ್ದಾರೆ. ಆಕೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ನಂತರ ಆಕೆಯ ಸಂಬಂಧಿಕರು ಅಮರೇಶ್ ಮನೆಗೆ ಭೇಟಿ ನೀಡಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಹಲವು ವರ್ಷಗಳಿಂದ ಅಮರೇಶ್ ತಮ್ಮ ಸಮುದಾಯವನ್ನು ಗುರಿಯಾಗಿಸಿ ಅವಹೇಳನ ಮಾಡುವುದು, ನಿಂದಿಸುವುದು ಮಾಡುತ್ತಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದಲ್ಲಿ ದಲಿತ ದೌರ್ಜನ್ಯಗಳು
ಇದಕ್ಕೂ ಮುನ್ನ ಚಾಮರಾಜನಗರ ತಾಲೂಕಿನ ಹೆಗ್ಗೋಟಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಟ್ಯಾಂಕ್ ನಿಂದ ನೀರು ಕುಡಿದಿದ್ದಾಳೆ ಎಂದು ಗೋಮೂತ್ರದಿಂದ ಮಿನಿನೀರಿನ ತೊಟ್ಟಿಯನ್ನು ಮೇಲ್ಜಾತಿ ಸಮುದಾಯದವರು ಶುಚಿಗೊಳಿಸಿದ್ದರು. ಇದಕ್ಕೆ ದಲಿತ ಯುವಕರು ಗ್ರಾಮದ ವಿವಿಧೆಡೆ ತೆರಳಿ ಮಿನಿ ಜಲಾಶಯದ ನೀರು ಕುಡಿದು ಆಕ್ರೋಶ ವ್ಯಕ್ತಪಡಿಸಿದರು. ಚಾಮರಾಜನಗರ ತಹಶೀಲ್ದಾರ್ ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಯುವಕರು ಪೊಲೀಸರೊಂದಿಗೆ ತೆರಳಿದ್ದರು.

SCROLL FOR NEXT