ರಾಜ್ಯ

ಬೆಳಗಾವಿ: ಮಗನ ಹತ್ಯೆಗೈದಿದ್ದ ತಂದೆಗೆ 10 ವರ್ಷ ಜೈಲು ಶಿಕ್ಷೆ

Manjula VN

ಬೆಳಗಾವಿ: ಮಗನನ್ನು ಹತ್ಯೆಗೈದಿದ್ದ ತಂದೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ, 11ನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ರಾಮದುರ್ಗ ತಾಲೂಕಿನ ಸಾಲಪುರ ಗ್ರಾಮದ ಶಿವಪ್ಪ ಗಂಗಪ್ಪ ಮುದಕವಿ ಎಂಬಾತನೇ ಶಿಕ್ಷೆಗೆ ಗುರಿಯಾದ ಕೈದಿ. ಶಿವಪ್ಪ 2018ರಂದು ತನ್ನ ಮಕ್ಕಳಾದ ಗಂಗಾಧರ ಮತ್ತು ವಿಠ್ಠಲ್ ಅವರ ಜತೆ ಜಗಳವಾಡಿದ್ದ. ನೀವು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ನಿಂದಿಸಿ, ಹೀಗೆ ಮಾಡಿದರೇ ನಿಮ್ಮನ್ನು ಕೊಂದು ಬಿಡುವೆ ಎಂದು ಅಚಾಚ್ಯ ಶಬ್ದಗಳಿಂದ ಬೈದಿದ್ದ.

ಮಕ್ಕಳ ಜತೆ ಜಗಳವಾಡಿದ ಮಾರನೇಯ ದಿನ ಮಧ್ಯರಾತ್ರಿ 1.30ರ ವೇಳೆಗೆ ಟ್ರಾೃಕ್ಟರ್ ತಾನೇ ಖುದ್ದಾಗಿ ಚಲಾಯಿಸಿಕೊಂಡು ಹೋದ ಶಿವಪ್ಪ ಮುದಕವಿ, ಎದುರಿಗೆ ಬೈಕ್ ಮೇಲೆ ಆಗಮಿಸುತ್ತಿದ್ದ ತನ್ನ ಮಗ ಗಂಗಾಧರನ ಮೇಲೆ ಹಾಯಿಸಿ ಹತ್ಯೆ ಮಾಡಿದ್ದ. ಈ ಪ್ರಕರಣ ಕಟಕೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಪಿಐ ಶ್ರೀನಿವಾಸ ಹಾಂಡ್ ಅವರು, ಸಮಗ್ರ ತನಿಖೆ ನಡೆಸಿ, ಆರೋಪಿಯ ಸಾಕ್ಷಾಧಾರಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಾದ-ಪ್ರತಿವಾದ ಆಲಿಸಿದ 11ನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ರಮಾಕಾಂತ ಚವ್ಹಾಣ ಅವರು, ಆರೋಪಿ ಶಿವಪ್ಪನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶೈಲಜಾ ಎಂ.ಪಾಟೀಲ ಅವರು ವಕಾಲತ್ತು ವಹಿಸಿದ್ದರು. ಶಿಕ್ಷೆಗೆ ಒಳಗಾದ ಶಿವಪ್ಪ ಮುದಕವಿಯನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.

SCROLL FOR NEXT