ರಾಜ್ಯ

ಶಿವಮೊಗ್ಗ ಏರ್ ಪೋರ್ಟ್ ಇನ್ನೆರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ, ಸೂರ್ಯ-ಚಂದ್ರ ಇರುವವರೆಗೆ ಯಡಿಯೂರಪ್ಪ ಹೆಸರು ಶಾಶ್ವತ: ಬಸವರಾಜ ಬೊಮ್ಮಾಯಿ

Sumana Upadhyaya

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಏರ್ ಪೋರ್ಟ್ ಇನ್ನೆರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು 2014ರ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶದಲ್ಲಿ ವಿಮಾನ ನಿಲ್ದಾಣಗಳು, ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆ, ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗಾಗಿ ಮನೆ ನಿರ್ಮಾಣ, ಶೌಚಾಲಯ ಹೀಗೆ ಮೂಲಭೂತ ಸೌಕರ್ಯಗಳಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ ಎಂದರು.

ಇಂದು ಭಾರತ ದೇಶ ಆರ್ಥಿಕವಾಗಿ ಸಬಲವಾಗಿದ್ದು, ಇಡೀ ಪ್ರಪಂಚ ನಮ್ಮತ್ತ ನೋಡುತ್ತಿದೆ. ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿರುವುದು ಇದಕ್ಕೆ ಸಾಕ್ಷಿ ಎಂದರು.ತಂತ್ರಜ್ಞಾನ, ಸಂಶೋಧನೆಯಲ್ಲಿ ಕರ್ನಾಟಕ ನಂಬರ್ 1 ಇದೆ, ವಿಜಯಪುರ, ಹಾಸವ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಶಿವಮೊಗ್ಗ ಏರ್ ಪೋರ್ಟ್ ಆರ್ಥಿಕತೆಗೆ ಹೊಸ ದಿಕ್ಕು: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕೇವಲ ಸಂಚಾರಕ್ಕೆ ಮಾತ್ರವಲ್ಲದೆ ಯುವಜನತೆಗೆ ಉದ್ಯೋಗ, ಆರ್ಥಿಕತೆಗೆ ಹೊಸ ದಿಕ್ಕು, ಹೊಸ ಅವಕಾಶಗಳನ್ನು ತೆರೆಯಲಿದೆ ಎಂದರು.ರಾಜ್ಯದಲ್ಲಿ ಏರ್‌ಪೋರ್ಟ್‌ಗಳ ಜಾಲ ಸೃಷ್ಟಿಯಾಗುತ್ತಿದೆ. ಬಂದರುಗಳ ಅಭಿವೃದ್ದಿ ಹಾಗೂ ವಿಸ್ತರಣೆ ಆಗುತ್ತಿದೆ. ಅದೇ ರೀತಿಯಲ್ಲಿ ಹೈವೇ ರಸ್ತೆಗಳು ಕೂಡಾ ಉದ್ಘಾಟನೆ ಆಗುತ್ತಿದೆ. ಇವೆಲ್ಲವೂ ಡಬಲ್ ಇಂಜಿನ್ ಸರ್ಕಾರದ ಕೊಡುಗೆಯಾಗಿದೆ ಎಂದು ಹೇಳಿದರು.

ಯಡಿಯೂರಪ್ಪನವರು ಹುಟ್ಟಾ ಹೋರಾಟಗಾರರು, ಅವರು ಶಿಕಾರಿಪುರದಿಂದ ಏಳು ಬಾರಿ ಆಯ್ಕೆಯಾಗಿ, ರೈತರಿಗಾಗಿ, ನೀರಾವರಿ, ಬಗರ್ ಹುಕುಂಗೆ ಹೋರಾಟ ಮಾಡಿದರು. ಅವರು ನಮ್ಮ ಮಾರ್ಗದರ್ಶಕರು ಎಂದು ಶ್ಲಾಘಿಸಿದರು. ಸೂರ್ಯ-ಚಂದ್ರರು ಇರುವವರೆಗೂ ಕರ್ನಾಟಕ ಇತಿಹಾಸದಲ್ಲಿ ಯಡಿಯೂರಪ್ಪನವರ ಹೆಸರು ಶಾಶ್ವತವಾಗಿ ಉಳಿಯುತ್ತದೆ, ಮಲೆನಾಡಿಗೆ ಪ್ರದೇಶಕ್ಕೆ ಯಡಿಯೂರಪ್ಪ ಒಂದು ಕಾಣಿಕೆ ಎಂದರು. 

SCROLL FOR NEXT