ರಾಜ್ಯ

ಕಳಸಾ-ಬಂಡೂರಿ ಯೋಜನೆ: ಅನುಮತಿ ಹಿಂಪಡೆಯುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಗೋವಾ ಸರ್ಕಾರ ಮುಂದು!

Manjula VN

ಪಣಜಿ: ಕರ್ನಾಟಕದ ಮಹದಾಯಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಜಿಪಿಆರ್) ನೀಡಲಾಗಿರುವ ಅನುಮೋದನೆಯನ್ನು ರದ್ದುಪಡಿಸವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಗೋವಾ ಸರ್ಕಾರ ಮುಂದಾಗಿದೆ.

ಕೇಂದ್ರ ಸರ್ಕಾರ ನೀಡಿರುವ ಅನುಮೋದನೆ ವಿರೋಧಿಸಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಲು ಗೋವಾ ಸಚಿವ ಸಂಪುಟ ಸಭೆ ಸೋಮವಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರ ಬಳಿ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಲು ನಿರ್ಧರಿಸಲಾಗಿದೆ.

ಸಂಪುಟದ ನಿರ್ಧಾರಗಲನ್ನು ಮಾಧ್ಯಮಗಳಿಗೆ ತಿಳಿಸಿದ ಸಾವಂತ್ ಅವರು, ಡಿಪಿಆರ್ ಗಳಿಗೆ ಮಂಜೂರಾದ ಅನುಮೋದನೆಗೆ ವಿರೋಧ ವ್ಯಕ್ತಪಡಿಸಲು ಪ್ರಧಾನಿಯನ್ನು ಭೇಟಿ ಮಾಡುತ್ತೇವೆ. ಅಲ್ಲದೆ, ಕೇಂದ್ರ ಗೃಹ ಸಚಿವರು ಮತ್ತು ಜಲಶಕ್ತಿ ಸಚಿವರ ಬಳಿಗೂ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲು ಸಂಪುಟ ನಿರ್ಧರಿಸಿದೆ.

ಗೋವಾ ಪ್ರತಿಪಕ್ಷಗಳು ವಿರೋಧಕ್ಕಾಗಿ ಸಮಸ್ಯೆಗಳನ್ನು ಸೃಷ್ಟಿಸಬಾರದು. ಮಹದಾಯಿ ನಮಗೆ ಸಂಜೀವಿನಿಯಾಗಿರುವುದರಿಂದ ಎಲ್ಲರೂ ಒಗ್ಗಟ್ಟಾಗಬೇಕು. ನಾನು ಮತ್ತೊಮ್ಮೆ ಪುನರುಚ್ಚರಿಸುತ್ತೇನೆ. ಮಹದಾಯಿ ನನಗೆ ತಾಯಿ ಇದ್ದಂತೆ ಎಂದರು.

ಮಹದಾಯಿ ನದಿ ವಿಚಾರದಲ್ಲಿ ಗೋವಾ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಕಳಸಾ-ಬಂಡೂರಿ ಅಣೆಕಟ್ಟುಗಳ ನಿರ್ಮಾಣವು ಉತ್ತರ ಗೋವಾ ಜಿಲ್ಲೆಯಲ್ಲಿ ವಾಸಿಸುವ ಜನರ ಕುಡಿಯುವ ನೀರಿನ ಅಗತ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗ ಕರ್ನಾಟಕದ ಡಿಪಿಆರ್'ಗೆ ನೀಡಲಾದ ಒಪ್ಪಿಗೆ ಕೇವಲ ತಾತ್ವಿಕೆ ಒಪ್ಪಿಗೆಯಾಗಿದೆ. ಆದರೆ, ಯೋಜನೆ ಜಾರಿಗೆ ಕರ್ನಾಟಕವು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮತಿ ಪಡೆಯಲೇಬೇಕು. ಆದರೆ, ಮಹದಾಯಿ ನದಿಯು ವನ್ಯಜೀವಿ ಅಭಯಾರಣ್ಯದ ಮೂಲಕ ಹರಿಯುವುದರಿಂದ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ನೀಡುವುದು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

SCROLL FOR NEXT