ರಾಜ್ಯ

ಅರಣ್ಯ ನಾಶಪಡಿಸಿ ರಸ್ತೆ ವಿಸ್ತರಣೆ ಮಾಡುವುದನ್ನು ನಿಲ್ಲಿಸಬೇಕು: ಸರ್ಕಾರಕ್ಕೆ ಪರಿಸರ ಸಂರಕ್ಷಣಾ ವಾದಿಗಳ ಆಗ್ರಹ

Manjula VN

ಬೆಂಗಳೂರು: ಅರಣ್ಯ ನಾಶಪಡಿಸಿ ರಸ್ತೆ ವಿಸ್ತರಣೆ ಮಾಡಲು ಮುಂದಾಗುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕ್ರಮವನ್ನು ಪರಿಸರ ಸಂರಕ್ಷಣಾ ವಾದಿಗಳು ಖಂಡಿಸಿದ್ದಾರೆ.

ಸರ್ಕಾರ ಒಂದು ಕಡೆ ಪರಿಸರ ಸೂಕ್ಷ್ಮವಲಯಗಳ ರಕ್ಷಣೆ ಬಗ್ಗೆ ಮಾತನಾಡುತ್ತಿದ್ದು, ಮತ್ತೊಂದು ಕಡೆ ರಸ್ತೆ ವಿಸ್ತರಣೆ, ಸುರಂಗಗಳ ಬಗ್ಗೆ ಮಾತನಾಡುತ್ತಿದೆ. ಇದು ನಿಜಕ್ಕೂ ವಿಪರ್ಯಾಸದ ವಿಚಾರ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್‌ ಕಟೀಲ್ ಅವರಿಗೆ ಪತ್ರ ಬರೆದಿದ್ದ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು, ಬಹುಕೋಟಿ ಯೋಜನೆಯಾದ ಶಿರಾಡಿ ಘಾಟ್ ವಿಭಾಗದ ಮಾರನಹಳ್ಳಿ ಅಡ್ಡಹೊಳೆ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 1976 ಕೋಟಿ ರೂ. ಮೊತ್ತದ ಬಿಡ್‌ ಅನ್ನು ಆಹ್ವಾನಿಸಲಾಗಿದೆ ಎಂದು ಹೇಳಿದ್ದರು.

ಹುಕೋಟಿ ರಸ್ತೆ ಯೋಜನೆಯಾದ ಈ ಚತುಷ್ಪಥ ಕಾಮಗಾರಿಯು ಮಂಗಳೂರು-ಬೆಂಗಳೂರು ನಡುವಿನ ಸಂಚಾರಕ್ಕೆ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಶಿರಾಡಿ ಘಾಟ್ ಟನಲ್ ನಿರ್ಮಾಣ ಯೋಜನೆಯನ್ನು 15,000 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 23 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಇದೇ ಏಪ್ರಿಲ್ 2023ರ ಒಳಗೆ ಡಿಪಿಆರ್ ಅನ್ನು ಅಂತಿಮಗೊಳಿಸುವಂತೆ ಮತ್ತು ಮೇ 2023 ರಲ್ಲಿ ಬಿಡ್‌ಗಳನ್ನು ಆಹ್ವಾನಿಸುವುದಾಗಿ ತಿಳಿಸಿದ್ದರು.

ಸಕಲೇಶಪುರದಿಂದ ಮಾರನಹಳ್ಳಿಯವರೆಗೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹೆದ್ದಾರಿಯನ್ನು ತಕ್ಷಣವೇ ದುರಸ್ತಿ ಪಡಿಸಲಾಗುತ್ತದೆ. ದುರಸ್ತಿ ಕಾಮಗಾರಿಗೆ 12.20 ಕೋಟಿ ರುಪಾಯಿ ಅಂದಾಜು ವೆಚ್ಚವಾಗಲಿದೆ. ಇದರ ಟೆಂಡರ್‌ಗಳ ಮೌಲ್ಯಮಾಪನ ಮಾಡಲಾಗುತ್ತಿದೆ. ಗುಂಡಿ ಮುಚ್ಚುವ ಕಾಮಗಾರಿಯನ್ನು ಈ ಗುತ್ತಿಗೆದಾರರೇ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದರು.

ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು, ಬಂಡೀಪುರ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಪಶ್ಚಿಮ ಘಟ್ಟಗಳ ರಕ್ಷಣೆ ಕುರಿತು ಎನ್‌ಟಿಸಿಎ ಸಭೆಗಳನ್ನು ನಡೆಸುತ್ತಿದ್ದಾರೆ.

ಒಂದೆಡೆ ಸರ್ಕಾರ ಪರಿಸರ ಸಂರಕ್ಷಣೆ ಕುರಿತು ಮಾತನಾಡುತ್ತಿದ್ದು, ಮತ್ತೊಂದೆಡೆ ರಸ್ತೆ ವಿಸ್ತರಣೆ ಬಗ್ಗೆಯೂ ಮಾತನಾಡುತ್ತಿದೆ. ರಸ್ತೆ ವಿಸ್ತರಣೆಯಿಂದ ಪ್ರಾಚೀನ ಅರಣ್ಯ ಪ್ರದೇಶಗಳು ನಾಶಗೊಳ್ಳುತ್ತದೆ. ಈ ಸಂಬಂಧ ಇಬ್ಬರೂ ಸಚಿವರಿಗೆ ಶೀಘಅರದಲ್ಲೇ ಪತ್ರ ಬರೆದು ಮನವಿ ಸಲ್ಲಿಸಲಾಗುತ್ತದೆ. ಯೋಜನೆ ನಿಲ್ಲಿಸುವಂತೆ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

SCROLL FOR NEXT