ರಾಜ್ಯ

ಮೆಟ್ರೊ ಪಿಲ್ಲರ್ ಕುಸಿದು ದುರಂತ: ಏರ್ ಪೋರ್ಟ್ ಮಾರ್ಗದಲ್ಲಿ ಎನ್ ಸಿಸಿ ಲಿ ಕಾಮಗಾರಿಯ ಎರಡನೇ ದುರ್ಘಟನೆಯಿದು!

Sumana Upadhyaya

ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಮೆಟ್ರೊ ಪಿಲ್ಲರ್ ಕುಸಿದು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ತಾಯಿ ಮತ್ತು ಮಗು ನಿನ್ನೆ ಮೃತಪಟ್ಟ ಘಟನೆಯ ನಂತರ ಕೆಲ ತಿಂಗಳ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಮೆಟ್ರೊದ ಏರ್ ಪೋರ್ಟ್ ಮಾರ್ಗದಲ್ಲಿ ಇದು ಎರಡನೆಯ ದುರ್ಘಟನೆಯಾಗಿದೆ ಎಂಬುದು ಈಗ ಗೊತ್ತಾಗುತ್ತಿದೆ.

ಏರ್ ಪೋರ್ಟ್ ಲೈನ್ ನಲ್ಲಿ ಮೆಟ್ರೊ ಗುತ್ತಿಗೆ ಕಾಮಗಾರಿ ವಹಿಸಿಕೊಂಡಿದ್ದು ಎನ್ ಸಿಸಿ ಲಿಮಿಟೆಡ್. ಹೆಣ್ಣೂರು ಕಾಸ್ಟಿಂಗ್ ಯಾರ್ಡ್ ನಲ್ಲಿ ನಾಲ್ಕು ತಿಂಗಳ ಹಿಂದೆ ದುರ್ಘಟನೆಯೊಂದು ನಡೆದಿದ್ದು ಅದನ್ನು ಮುಚ್ಚಿಹಾಕಲಾಗಿತ್ತು. ಆಗ ಯಾರಿಗೂ ಸಾವು ನೋವುಗಳಾಗಿರಲಿಲ್ಲ. ಆದರೆ ಅದರಿಂದಾಗಿ ಈ ಮಾರ್ಗದಲ್ಲಿ ಕಾಮಗಾರಿ ವಿಳಂಬವಾಗಿತ್ತು ಎಂದು ಮೆಟ್ರೊದ ನಂಬಲರ್ಹ ಮೂಲಗಳು ತಿಳಿಸಿವೆ. 

ಈ ಹಿಂದಿನ ಘಟನೆಯಲ್ಲಿ, ಉಗಿರ್ಡರ್ ನ್ನು ಎತ್ತುವಾಗ 250 ಟನ್ ತೂಕದ ಮುಖ್ಯ ಗ್ಯಾಂಟ್ರಿ ಕ್ರೇನ್ ನ ಬೀಮ್ ಮುರಿದಿತ್ತು. ಇದು ಒಂದು ದೊಡ್ಡ ಅಪಘಾತವಾಗಿದ್ದು, ಘಟನೆಯ ನಂತರ ಕಾಸ್ಟಿಂಗ್ ಯಾರ್ಡ್‌ನಲ್ಲಿನ ಕೆಲಸವು ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ ಏರ್‌ಪೋರ್ಟ್ ಲೈನ್‌ನ ಮೂಲಸೌಕರ್ಯ ಕಾರ್ಯಗಳ ತ್ವರಿತ ವೇಗಕ್ಕೆ ಅಡ್ಡಿಯಾಯಿತು. ಕೆಲಸವು ಮೂರು ತಿಂಗಳವರೆಗೆ ವಿಳಂಬವಾಯಿತು. ಒಂದು ತಿಂಗಳ ಹಿಂದೆ ಪುನಾರಂಭಗೊಂಡಿತ್ತು.

ಘಟನೆಗೆ ಕಾರಣ ಎನ್‌ಸಿಸಿ ಲಿಮಿಟೆಡ್ ಗುತ್ತಿಗೆ ವಹಿಸಿಕೊಂಡ ಕಂಪೆನಿಯಾಗಿದೆ. ಹೊಸ ಗ್ಯಾಂಟ್ರಿಯನ್ನು ಬಳಸುವ ಬದಲು, ಈಗಾಗಲೇ ಇತರ ನಿರ್ಮಾಣ ಕಾರ್ಯಗಳಿಗೆ ಬಳಸಲಾಗಿದ್ದ ಗ್ಯಾಂಟ್ರಿಯನ್ನು ಬಳಸಿದ್ದು ಅದು ನಿಷ್ಕ್ರಿಯವಾಗಿತ್ತು. 

ಹೆಣ್ಣೂರು ಯಾರ್ಡ್ ನಲ್ಲಿ ಇದುವರೆಗೆ ಸುಮಾರು 60 ಗಿರ್ಡರ್‌ಗಳನ್ನು ಸಿದ್ಧಪಡಿಸಲಾಗಿದ್ದು, ಅವಘಡ ಸಂಭವಿಸದೇ ಇದ್ದಿದ್ದರೆ 200 ಗಿರ್ಡರ್‌ಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಇದು ಬೆಣಿಗೇನಹಳ್ಳಿಯಿಂದ ಕೆಂಪಾಪುರದವರೆಗೆ ಸಾಗುವ ಕೆಆರ್ ಪುರಂ-ಹೆಬ್ಬಾಳ-ಕೆಐಎ ಲೈನ್‌ನ ಪ್ಯಾಕೇಜ್ ಒಂದರ ಅವಶ್ಯಕತೆಗಳನ್ನು ಪೂರೈಸುತ್ತದೆ. 37-ಕಿಮೀ ಏರ್‌ಪೋರ್ಟ್ ಲೈನ್‌ನಲ್ಲಿ ಎಲ್ಲಾ ಮೂರು ಪ್ಯಾಕೇಜ್‌ಗಳಿಗೆ ಎನ್‌ಸಿಸಿ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಎನ್ ಸಿಸಿ ಲಿಮಿಟೆಡ್ ನ ಯಾರೂ ಸಂಪರ್ಕಕ್ಕೆ ಕರೆ ಮಾಡಿದರೆ ಸಿಗಲಿಲ್ಲ. 

SCROLL FOR NEXT