ರಾಜ್ಯ

ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶಕ್ಕೆ ಸೇರಿದ ನಾಲ್ವರಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ

Ramyashree GN

ಬೆಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಬೆಂಗಳೂರಿನ ವಿಶೇಷ ನ್ಯಾಯಾಲಯವು ಶುಕ್ರವಾರ ನಿಷೇಧಿತ ಜಮಾತ್-ಉಲ್-ಮುಜಾಹಿದ್ದೀನ್‌ ಬಾಂಗ್ಲಾದೇಶ (ಜೆಎಂಬಿ) ಕ್ಕೆ ಸೇರಿದ ನಾಲ್ವರು ಸದಸ್ಯರಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.

ಕ್ರಿಮಿನಲ್ ಪಿತೂರಿ, ಡಕಾಯಿತಿ, ಮನೆ-ಅತಿಕ್ರಮಣ, ಗಾಯ, ಹಲ್ಲೆ, ಗೃಹಭಂಗ ಮತ್ತು ಗೃಹಭಂಗಕ್ಕೆ ತಯಾರಿ ನಡೆಸಿದ ಆರೋಪದ ಮೇಲೆ ಐಪಿಸಿಯ ಸೆಕ್ಷನ್ 120 ಬಿ, 395, 452, 397, 399, 458, 468 ಮತ್ತು 471 ರ ಅಡಿಯಲ್ಲಿ ನಾಲ್ಕು ಭಯೋತ್ಪಾದನೆಗೆ ಸಂಬಂಧಿತ ಪ್ರಕರಣಗಳಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ.

ನಾಲ್ವರನ್ನು ಕಡೋರ್ ಕಾಜಿ ಅಲಿಯಾಸ್ ಮಿಜನೂರ್ ರಹಮಾನ್, ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಮುಸ್ತಫಿಜುರ್ ರೆಹಮಾನ್ ಅಲಿಯಾಸ್ ತುಹಿನ್ (ಡಬ್ಲ್ಯುಬಿ), ಆದಿಲ್ ಶೇಖ್ ಅಲಿಯಾಸ್ ಅಸಾದುಲ್ಲಾ ಮತ್ತು ಮುರ್ಷಿದಾಬಾದ್ ಜಿಲ್ಲೆಯ ಅಬ್ದುಲ್ ಕರೀಮ್ ಅಲಿಯಾಸ್ ಕೊರಿಮ್ ಎಸ್‌ಕೆ ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಜೆಎಂಬಿಯ ಅಡಗುತಾಣದಿಂದ ಬಾಂಬ್‌ಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ತಯಾರಿಸಲು ಬಳಸಲಾದ ಅಪಾರ ಪ್ರಮಾಣದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಉಪಕರಣಗಳು, ರಾಸಾಯನಿಕ ಉಪಕರಣಗಳು, ಕಂಟೈನರ್‌ಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣವು ಆರಂಭದಲ್ಲಿ 2019ರ ಜುಲೈ 7 ರಂದು ಬೆಂಗಳೂರಿನ ಸೋಲದೇವನಹಳ್ಳಿಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅದಾದ ಒಂದು ತಿಂಗಳ ನಂತರ ಜುಲೈ 29ರಂದು ಎನ್ಐಎ ಈ ಪ್ರಕರಣ ಕೈಗೆತ್ತಿಕೊಂಡಿತು. 2018 ರಲ್ಲಿ ಕೆಆರ್ ಪುರಂ, ಅತ್ತಿಬೆಲೆ ಮತ್ತು ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಮಾಡಿದ ಇತರ ನಾಲ್ಕು ಡಕಾಯಿತಿಗಳಿಗೆ ಸಂಬಂಧಿಸಿವೆ. ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆ ಈ ಎಲ್ಲಾ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.

ಎನ್‌ಐಎ ತನಿಖೆಯ ಪ್ರಕಾರ, 'ಆರೋಪಿಗಳು ಭಾರತದಲ್ಲಿ ಜೆಎಂಬಿಯ ಚಟುವಟಿಕೆಗಳನ್ನು ಮುಂದುವರಿಸುವ ಉದ್ದೇಶದಿಂದ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಡಕಾಯಿತಿ ಮಾಡುವ ಮೂಲಕ ಹಣವನ್ನು ಸಂಗ್ರಹಿಸಿದ್ದರು. ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದರು ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಅದು ಹೇಳಿದೆ. ಡಕಾಯಿತಿಯಿಂದ ಲಭ್ಯವಾದ ಚಿನ್ನವನ್ನು ಮಾರಿ ಆದಾಯವನ್ನು ಸಂಗ್ರಹಿಸಿದ್ದರು. ಇದುವರೆಗೆ 11 ಆರೋಪಿಗಳನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಈ ಹಿಂದೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.

SCROLL FOR NEXT