ರಾಜ್ಯ

ಬೀದಿ ಬದಿ ವ್ಯಾಪಾರಿಗಳು, ಕಸ ಸಂಗ್ರಹಿಸುವವರ ಸುಲಿಗೆ ಮಾಡುತ್ತಿದೆ ಬಿಜೆಪಿ: ಡಿ.ಕೆ.ಶಿವಕುಮಾರ್

Manjula VN

ಬೆಂಗಳೂರು: ಬಿಜೆಪಿ ಸರ್ಕಾರ ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತು ಕಸ ಸಂಗ್ರಹಿಸುವವರಿಂದಲೂ ಹಣ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೋಮವಾರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ‘ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಬೆಂಗಳೂರು ಉಳಿಸಿ’ ಎಂಬ ಘೋಷಣೆಯೊಂದಿಗೆ ನಗರದ 300 ಕಡೆ ಹಮ್ಮಿಕೊಂಡಿದ್ದ ಆಂದೋಲನದ ಅಂಗವಾಗಿ ಟ್ರಿನಿಟಿ ಸರ್ಕಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.

“ಕೆಲವು ದಿನಗಳ ಹಿಂದೆ, ನಾನು ಬೀದಿ ಬದಿ ವ್ಯಾಪಾರಿಗಳ ಸಮಾವೇಶವೊಂದರಲ್ಲಿ ಭಾಗವಹಿಸಿದ್ದೆ. ಈ ವೇಳೆ ಹಲವರು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಪ್ರತಿ ವಿಧಾನಸಭಾ ಕ್ಷೇತ್ರದ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿ ದಿನ 200ರಿಂದ 300 ರೂ.ವರೆಗೆ ಸಂಗ್ರಹಿಸಲಾಗುತ್ತಿದ್ದು, ಮಾಸಿಕ 1 ಕೋಟಿ ರೂ. ಸಂಗ್ರಹವಾಗುತ್ತಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಈ ಮಟ್ಟಕ್ಕೆ ಹೋಗಿದೆ’ ಎಂದು ಆರೋಪಿಸಿದರು.

ಐಟಿ ರಾಜಧಾನಿಯು ಇಂದು ಗುಂಡಿಗಳು ಮತ್ತು ಕಸದ ರಾಜಧಾನಿಯಾಗಿ ಮಾರ್ಪಟ್ಟಿದೆ. 40 ರಷ್ಟು ಕಮಿಷನ್ ರೊಂದಿಗೆ ಭ್ರಷ್ಟಾಚಾರದ ರಾಜಧಾನಿಯಾಗಿಯೂ ಮಾರ್ಪಟ್ಟಿದೆ. ‘ಬಿಜೆಪಿ ಸರ್ಕಾರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವ ಕಾರಣ ಬೆಂಗಳೂರಿನಲ್ಲಿ ಗುಂಡಿಗಳಿಂದ ಅನೇಕ ಸಾವುಗಳು ಸಂಭವಿಸಿವೆ. ದುರಾಡಳಿತದ ಬಗ್ಗೆ ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.

ನಗರ ಹಾಗೂ ರಾಜ್ಯದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ಸರಕಾರಕ್ಕೆ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ಮಾತ್ರ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಅದಕ್ಕಾಗಿಯೇ ಜನರ ಧ್ವನಿಯಾಗಿ ಕೆಲಸ ಮಾಡಲು ಪ್ರಜಾಧ್ವನಿ ಯಾತ್ರೆ ಕೈಗೊಂಡಿದೆ ಎಂದು ತಿಳಿಸಿದರು.

ಬಿಜೆಪಿ ಆಡಳಿತದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಆದರೆ ಜನರ ಆದಾಯವು ತಳದಲ್ಲಿಯೇ ಇದೆ. ಈ ಬಗ್ಗೆ ನಾವು ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಕೇಳಿದ್ದೇವೆ. ಈ ಬಗ್ಗೆ ಸರ್ಕಾರ ನೇರ ಚರ್ಚೆಗೆ ಬರಲಿ. ನಾವು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ನೂರಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಒಂದಕ್ಕೂ ಈ ಸರ್ಕಾರ ಉತ್ತರ ನೀಡಿಲ್ಲ. ಸರ್ಕಾರವೇ ಸಮಯ ಮತ್ತು ವೇದಿಕೆಯನ್ನು ನಿರ್ಧರಿಸಲಿ. ನಾನು ಚರ್ಚೆಗೆ ಹೋಗಲು ಸಿದ್ಧನಿದ್ದೇನೆಂದು ಸವಾಲು ಹಾಕಿದರು.

ಬೆಂಗಳೂರಿನಲ್ಲಿ 300 ಕಡೆ ಕಾಂಗ್ರೆಸ್ ಪ್ರತಿಭಟನೆ
ಭ್ರಷ್ಟಾಚಾರ ನಿರ್ಮೂಲನೆ, ಬೆಂಗಳೂರು ಉಳಿಸಿ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಸೋಮವಾರ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 300 ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ 'ಮೌನ' ಪ್ರತಿಭಟನಾ ರ್ಯಾಲಿಗಳನ್ನು ನಡೆಸಿತು,

ಕಾಂಗ್ರೆಸ್ ಪಕ್ಷದ ಈ ಪ್ರತಿಭಟನಾ ರ್ಯಾಲಿಗಳು ಏಪ್ರಿಲ್/ಮೇನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡಿದ್ದವು. ಟ್ರಾಫಿಕ್ ಸಿಗ್ನಲ್‌ಗಳು, ಮೆಟ್ರೋ ನಿಲ್ದಾಣಗಳು ಮತ್ತು ಮೇಲ್ಸೇತುವೆಗಳಲ್ಲಿ ಭಿತ್ತಿಫಲಕ, ಚಿತ್ರಗಳನ್ನು ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಾವಿನ ಬಲೆಗಳಾಗಿ ಮಾರ್ಪಟ್ಟಿರುವ ಗುಂಡಿಗಳು ಮತ್ತು ಗುಂಡಿಗಳಿಂದ ಸಂಭವಿಸಿದ ಸಾವುಗಳು ಹಾಗೂ ಶೇ.40 ಕಮಿಷನ್ ವಿಚಾರ ಹಿಡಿದು ಘೋಷಣೆಗಳನ್ನು ಕೂಗಿದರು.

ಟ್ರಿನಿಟಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಕರ್ನಾಟಕ ಉಸ್ತುವಾರಿ) ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಶಾಂತಿನಗರ ಶಾಸಕ ಎನ್.ಎ.ಹರೀಸ್ ಪಾಲ್ಗೊಂಡಿದ್ದರು.

ಮೆಜೆಸ್ಟಿಕ್, ಸಿಲ್ಕ್ ಬೋರ್ಡ್, ಲಾಲ್‌ಬಾಗ್, ಕೆ.ಆರ್.ಮಾರುಕಟ್ಟೆ, ಮಂತ್ರಿ ಮಾಲ್, ಪೀಣ್ಯ, ಹೆಬ್ಬಾಳ, ಸಿರ್ಸಿ ಸರ್ಕಲ್, ಆನಂದ್ ರಾವ್ ವೃತ್ತಗಳಲ್ಲಿ ಪ್ರತಿಭಟನೆಗಳು ನಡೆದವು.

SCROLL FOR NEXT