ರಾಜ್ಯ

ಕಾಂಗ್ರೆಸಿಗರ ಮೇಲಿನ ಪ್ರಕರಣಗಳ ಹಿಂಪಡೆಯುವಂತೆ ರಾತ್ರೋರಾತ್ರಿ ಪ್ರತಿಭಟನೆಗಿಳಿದ ಮಾಜಿ ಸಚಿವ ರತ್ನಾಕರ್!

Manjula VN

ಶಿವಮೊಗ್ಗ: ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಬುಧವಾರ ರಾತ್ರಿ ತೀರ್ಥಹಳ್ಳಿಯ ಡಿವೈಎಸ್ಪಿ ಕಚೇರಿ ಎದುರು ಧರಣಿ ನಡೆಸಿದರು.

ಮೂವರು ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ರತ್ನಾಕರ್ ಅವರು, ಪ್ರಕರಣ ಹಿಂಪಡೆಯುವಂತೆ ಹಾಗೂ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಂಗಳವಾರ ರಾತ್ರಿ ನಡೆದ ದಾಳಿಯಲ್ಲಿ ಭಾಗಿಯಾಗದ ಮೂವರಿಗೆ ಪೊಲೀಸರು ಬಿ-ರಿಪೋರ್ಟ್ ನೀಡಬೇಕು ಎಂದು ರತ್ನಾಕರ್ ಒತ್ತಾಯಿಸಿದರು.

‘ಪಟ್ಟಣದ ಹೊಟೇಲ್ ಒಂದರಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿಯ ಮೂವರು ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸದೆ ಹಲ್ಲೆಗೆ ಒಳಗಾದವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಈ ಕೂಡಲೇ ಎಫ್ಐಆರ್ ರದ್ದಾಗಬೇಕು’ ಎಂದು ಕಿಮ್ಮನೆ ರತ್ನಾಕರ್ ಪಟ್ಟು ಹಿಡಿದರು.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರನ್ನು ಪೊಲೀಸರು ಬಂಧಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದರು.

ಫೇಸ್ ಬುಕ್ ನಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆರೋಪ ಮಾಡುತ್ತಿದ್ದಾರೆ. ನಿರಪರಾಧಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದರಿಂದ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದು, ಅವರಲ್ಲಿ ಒಬ್ಬರು ಶುಕ್ರವಾರ ವಿದೇಶಕ್ಕೆ ಹಾರಲಿದ್ದಾರೆ. ಎಸ್ಪಿ ನನಗೆ ಭರವಸೆ ನೀಡಿದ್ದರಿಂದ ನಾನು ನನ್ನ ಪ್ರತಿಭಟನೆಯನ್ನು ಕೈಬಿಟ್ಟೆ ಎಂದು ಹೇಳಿದರು.

SCROLL FOR NEXT