ಬೆಂಗಳೂರು: ಸಿಗ್ನಲಿಂಗ್ ಸಮಸ್ಯೆಯಿಂದ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಮಂಗಳವಾರ ಬೆಳಿಗ್ಗೆ 5 ರಿಂದ ಮಧ್ಯಾರ್ನ 12.10ರವರೆಗೆ ರೈಲು ಸಂಚಾರ ವಿಳಂಬವಾಗಿ ಸಾವಿರಾರು ಪ್ರಯಾಣಿಕರು ಪರದಾಡಿದ ಬೆಳವಣಿಗೆಗಳು ಕಂಡು ಬಂದಿತು.
ತಮ್ಮ ನಿತ್ಯದ ಕೆಲಸ, ಕಾರ್ಯಗಳಿಗೆ ಮೆಟ್ರೋ ರೈಲು ಅವಲಂಬಿಸಿ ಬಂದಿದ್ದ ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದರು.
ಬೆಳಿಗ್ಗೆಯ ಪೀಕ್ ಅವರ್ ನಲ್ಲಿಯೇ ಮೆಟ್ರೋ ಕೈಕೊಟ್ಟಿತ್ತು. ನಿಧಾನವಾಗಿ ರೈಲುಗಳು ಸಂಚರಿಸುತ್ತಿದ್ದರಿಂದ ರೈಲು ನಿಲ್ದಾಣಗಳೆಲ್ಲಾ ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ನಗರದ ಮೆಜೆಸ್ಟಿಕ್, ಬೈಯಪ್ಪನಹಳ್ಳಿ ಸೇರಿ ನೇರಳ ಮಾರ್ಗದ ಬಹುತೇಕ ಎಲ್ಲಾ ನಿಲ್ದಾಣಗಳು ಜನರಿಂದ ತುಂಬಿ ಹೋಗಿದ್ದವು.
ಇದನ್ನೂ ಓದಿ: ಕೆಆರ್ ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗದಲ್ಲಿ ಬೆಟ್ಟಹಲಸೂರು ನಿಲ್ದಾಣ ಕುರಿತ ಗೊಂದಲಕ್ಕೆ ತೆರೆ
ಪ್ರತಿ ನಿಲ್ದಾಣದಲ್ಲೂ ರೈಲುಗಳು 65 ನಿಮಿಷಕ್ಕೂ ಹೆಚ್ಚಿನ ಕಾಲ ನಿಲುಗಡೆಯಾಗುತ್ತಿದ್ದವು. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಹಾಗೂ ಅತ್ತ ಬೈಯಪ್ಪನಹಳ್ಳಿಯಿಂದ ಹೊರಟ ಮೆಟ್ರೋ ಇಂದಿರಾನಗರದಲ್ಲಿಯೇ ಕೊನೆಯದಾಗಿ ನಿಲುಗಡೆಯಾಗುತ್ತಿತ್ತು. ಇದರಿಂದಾಗಿ ಸ್ವಾಮಿ ವಿವೇಕಾನಂದ ನಿಲ್ದಾಣ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ತೆರಳಬೇಕಾದವರು ಬಿಎಂಟಿಸಿ, ಖಾಸಗಿ ವಾಹನಗಳ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.
ಮಧ್ಯಾಹ್ನ 12.08 ರ ಹೊತ್ತಿಗೆ ಸಮಸ್ಯೆಯನ್ನು ಸರಿಪಡಿಸಲಾಯಿತು. ಬೈಯಪ್ಪನಹಳ್ಳಿ ಮತ್ತು ಎಸ್ವಿ ರಸ್ತೆ ನಡುವೆ ಗಂಟೆಗೆ 20 ಕಿ.ಮೀ ವೇಗದಲ್ಲಿ ರೈಲುಗಳು ಸಂಚರಿಸಿತ್ತು. ಇದು ಈ ಮಾರ್ಗದ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ನಮ್ಮ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಜಯನಗರ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಪ್ರತೀನಿತ್ಯ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕ ಬಿ.ಎಸ್.ನರಹರಿಯವರು ಮಾತನಾಡಿ, ಮೆಟ್ರೋ ನಿಲ್ದಾಣಕ್ಕೆ ಬೆಳಿಗ್ಗೆ ಹೋದ ಸಂದರ್ಭದಲ್ಲಿ ಜನಸಂದಣಿ ಕಂಡು ಬಂದಿತ್ತು. ಪ್ಲಾಟ್ ಫಾರ್ಟ್ ನಲ್ಲೂ ಜನಸಂದಣಿ ಇರುವುದು ಕಂಡು ಬಂದಿತ್ತು. ಈ ವೇಳೆ ವಿಚಾರಿಸಿದಾಗ ಸಿಗ್ನಲ್ ಸಮಸ್ಯೆ ಇರುವುದಾಗಿ ತಿಳಿದುಬಂದಿತ್ತು. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಬಿಎಂಆರ್'ಸಿಎಲ್ ರೈಲು ಹಾಗೂ ನಿಲ್ದಾಣಗಳಲ್ಲಿರುವ ವ್ಯವಸ್ಥೆಗಳನ್ನೇಕೆ ಬಳಕೆ ಮಾಡಲಿಲ್ಲ. ಕಾರಣಗಳು ತಿಳಿಯದೆ ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದರು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸುಪ್ರೀಂ ಕೋರ್ಟ್ ವಕೀಲರ ಮೇಲೆ ಹಲ್ಲೆ, ಫೋನ್ ಕಸಿದು ಪರಾರಿ!
ಮೆಟ್ರೋ ನಿಲ್ದಾಣಕ್ಕೆ ಹೋಗಿ, ಅಲ್ಲಿನ ಪರಿಸ್ಥಿತಿ ಕಂಡು ಮನೆಗೆ ಹಿಂತಿರುಗಿದೆ. ನನ್ನ ಒಂದು ಗಂಟೆಯ ಕೆಲಸ ವ್ಯರ್ಥವಾಯಿತು ಎಂದು ಮೆಟ್ರೋ ಪ್ರಯಾಣಿಕರಾದ ಪೂಜಾ ಕೆ ಎಂಬುವವರು ಹೇಳಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ಗದ್ದಲಗಳು ಕಂಡು ಬಂದಿತ್ತು. ವೇಳಾಪಟ್ಟಿ, ಪ್ರಕಟಣೆಗಲು ಎಲ್ಲವೂ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಏನಾಗುತ್ತಿದೆ ಎಂದು ಮಾಹಿತಿ ನೀಡಲು ಸಿಬ್ಬಂದಿಗಳೂ ಇರಲಿಲ್ಲ. ಪೀಕ್ ಅವರ್ ನಲ್ಲಿ ಸಾಕಷ್ಟು ಸಮಸ್ಯೆಗಳಾಗಿತ್ತು ಎಂದು ಮತ್ತೊಬ್ಬ ಪ್ರಯಾಣಿಕ ದೀಪಕ್ ಎಂಬುವವರು ಹೇಳಿದ್ದಾರೆ.
ಅಲ್ಲದೆ, ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ನಿಲ್ದಾಣಗಳಲ್ಲಿ ಪರಿಸ್ಥಿತಿಯ ಫೋಟೋಗಳನ್ನು ಹಂಚಿಕೊಂಡು, ಬಿಎಂಆರ್'ಸಿಎಲ್ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ನಡುವೆ ಸಮಸ್ಯೆ ಕಂಡು ಬಂದ 2 ಗಂಟೆಗಳ ಬಳಿಕ ಬಿಎಂಆರ್'ಸಿಎಲ್ ಟ್ವಿಟರ್ ನಲ್ಲಿ ಮಾಹಿತಿ ನೀಡುವ ಕೆಲಸ ಮಾಡಿತು. “ಸಿಗ್ನಲಿಂಗ್ ಸಮಸ್ಯೆಗಳಿಂದಾಗಿ ಪರ್ಪಲ್ ಲೈನ್ನಲ್ಲಿ ರೈಲುಗಳ ಸಂಚಾರದಲ್ಲಿ ವಿಳಂಬವಾಗುತ್ತಿದೆ. ಸಮಸ್ಯೆ ಸರಿಪಡಿಸುವಲ್ಲಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆಂದು ಹೇಳಿತು.
ಬಿಎಂಆರ್'ಸಿಎಲ್'ನ ಈ ಪ್ರತಿಕ್ರಿಯೆ ಕುರಿತಂತೆಯೂ ಹಲವು ಆಕ್ರೋಶ ಹೊರಹಾಕಿದರು. ನಮ್ಮ ಮೆಟ್ರೋ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರೂ ಟ್ವಿಟರ್ ಬಳಕೆದಾರರಾಗಿರುವುದಿಲ್ಲ. ಸಿಗ್ನಲಿಂಗ್ ಸಮಸ್ಯೆ ಕುರಿತು ಸಾರ್ವಜನಿಕರಿಗೇಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಅಲ್ಲದೆ, BMRCL ವೃತ್ತಿಪರವಲ್ಲ. ಬೇಜವಾಬ್ದಾರಿಯುತ ಸಂಸ್ಥೆಯಾಗಿದೆ ಎಂದು ಕಿಡಿಕಾರಿದರು. ಇನ್ನೂ ಕೆಲವರು ಟ್ವೀಟ್ ಕೇವಲ ಇಂಗ್ಲೀಶ್ ನಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಎಲ್ಲಾ ಬೆಳವಣಿರೆಗಳ ಬಳಿಕ ಸೇವೆ ಮರುಸ್ಥಾಪಿಸಿರುವ ಕುರಿತು ಮಾಹಿತಿ ನೀಡುವ ಟ್ವೀಟ್ ನ್ನು ಬಿಎಂಆರ್'ಸಿಎಲ್ ಹಂಚಿಕೊಂಡಿತು.