ರಾಜ್ಯ

ಕೆಎಸ್ ಆರ್ ಟಿಸಿ ಚಾಲಕ ಆತ್ಮಹತ್ಯೆ ಯತ್ನ ಕೇಸ್: ಚಲುವರಾಯಸ್ವಾಮಿ ಪ್ರತಿಕ್ರಿಯೆ; ವರ್ಗಾವಣೆ ಆದೇಶಕ್ಕೆ ತಡೆ!

Shilpa D

ಬೆಂಗಳೂರು: ನೆಲಮಂಗಲ ಡಿಪೋ ಕೆಎಸ್ ಆರ್ ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ತಮ್ಮ ಮೇಲೆ ಗಂಭೀರವಾದ ಆರೋಪ ಕೇಳಿಬಂದ ಬೆನ್ನಲ್ಲೇ ಚಲುವರಾಯಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅನಾವಶ್ಯಕ ರೀತಿಯಲ್ಲಿ ರಾಜಕೀಯ ಮಾಡ್ತಿದ್ದಾರೆ. ಇದೇ ಅವರ ಕಾಯಕ. ವರ್ಗಾವಣೆ ಪ್ರಕ್ರಿಯೆ ಸಹಜ. ಸರ್ಕಾರ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿರುತ್ತದೆ. ನಾನು ಆ ಚಾಲಕನ ವರ್ಗಾವಣೆಗೆ ಲೆಟರ್ ಕೊಟ್ಟಿಲ್ಲ, ವರ್ಗಾವಣೆ ಮಾಡಿ ಎಂದು ನಾನು ಹೇಳಿಲ್ಲ. ಆದರೆ ವರ್ಗಾವಣೆ ಆಗಿದೆ ಎಂದಿದ್ದಾರೆ.

ಆ ಚಾಲಕನ ಬಾವ ನನಗೆ ಫೋನ್ ಮಾಡಿದ್ದರು. ಹಾಗಾಗಿ ಅದನ್ನು ನಾನೇ ಹೋಲ್ಡ್ ಮಾಡುವಂತೆ ಹೇಳಿದ್ದೇನೆ. ಏನಾದರೂ ತಪ್ಪಿದ್ದರೆ ತನಿಖೆ ಮಾಡಿ ಆಮೇಲೆ ವರ್ಗಾವಣೆ ಮಾಡಿ ಎಂದು ಹೇಳಿದ್ದೆ. ಅದನ್ನು ಕ್ಯಾನ್ಸಲ್ ಮಾಡಿ ಎಂದು ಒತ್ತಾಯಿಸಿ ನಿನ್ನೆ ಈ ರೀತಿ ಮಾಡಿಕೊಂಡಿದ್ದಾರೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ಸಚಿವರ ಶಿಫಾರಸ್ಸಿನ ಮೇರೆಗೆ ನನ್ನನ್ನು ವರ್ಗಾವಣೆ ಮಾಡಿದ್ದಾರೆ. ನನಗೆ ಹಿರಿಯ ಅಧಿಕಾರಿಗಳು ಕೊಟ್ಟಿರುವ ಟಾರ್ಚರ್​​​ನಲ್ಲಿ ಸಚಿವರ ಕೈವಾಡ ಇದೆ ಎಂದು ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಆರೋಪ ಮಾಡಿದ್ದಾರೆ.

ನಾಗಮಂಗಲದಲ್ಲಿ ಕೆಎಸ್‌ಆರ್‌ಟಿಸಿ ಉದ್ಯೋಗಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಜಾಗೊಳಿಸುವಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸರ್ಕಾರ ಬಂದು ಒಂದು ತಿಂಗಳಾಗುವಷ್ಟರಲ್ಲೇ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಕೂಡಲೇ ಸಚಿವ ಚಲುವರಾಯಸ್ವಾಮಿಯನ್ನು ವಜಾ ಮಾಡಿ, ಪ್ರಕರಣದ ತನಿಖೆ ಮಾಡುವಂತೆ ಎಚ್‌ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

SCROLL FOR NEXT