ರಾಜ್ಯ

ನಿಮ್ಮ ಭಾಷೆ ಅರ್ಥ ಆಗ್ತಿಲ್ಲ; ಸ್ಪೀಕರ್ ಟು ಕನ್ನಡ ಆ್ಯಪ್ ಬೇಕು: ಸದನದಲ್ಲಿ ಸ್ಪೀಕರ್ ಕಾಲೆಳೆದ ಯತ್ನಾಳ್

Manjula VN

ಬೆಂಗಳೂರು: ವಿಧಾನಮಂಡಲದ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡುವ ಕನ್ನಡ ಭಾಷೆಯ ಬಗ್ಗೆ ನಿನ್ನೆ ವಿಧಾನಸಭೆಯ ಅಧಿವೇಶನದಲ್ಲಿ ಸ್ವಾರಸ್ಯಕರ ಮಾತುಕತೆ ನಡೆಯಿತು.

ವಿಧಾನಸಭೆಯ ಉಪಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾದ ಮೇಲೆ ಅವರನ್ನು ಅಭಿನಂದಿಸುವ ಸಂದರ್ಭದಲ್ಲಿ ಸಭಾಧ್ಯಕ್ಷರು ಹಳ್ಳಿ ಎಂಬ ಪದವನ್ನು ಹಲ್ಲಿ ಎಂದು ಉಚ್ಛಾರಣೆ ಮಾಡಿದರು. ಅದನ್ನು ಬಸನಗೌಡ ಯತ್ನಾಳ್ ಉಲ್ಲೇಖಿಸಿ ಹಳ್ಳಿ, ಹಳ್ಳಿ ಎಂದು ತಿದ್ದುವ ಯತ್ನ ಮಾಡಿದರು. ಅದನ್ನು ಸಭಾಧ್ಯಕ್ಷರು ನಗುಮೊಗದಿಂದಲೇ ಸ್ವೀಕರಿಸಿದರು.

ಅಭಿನಂದನೆ ಮಾತು ಮುಗಿದ ಬಳಿಕ ಎದ್ದು ನಿಂತ ಯತ್ನಾಳ್ ರಾಜ್ಯದಲ್ಲಿ ಕರಾವಳಿ ಭಾಗದ ಮಂಗಳೂರು ಕನ್ನಡ ಶುದ್ಧವಾಗಿದೆ ಮತ್ತು ಸುಂದರ ಭಾಷೆಯಾಗಿದೆ. ರಾಜ್ಯದಲ್ಲಿ ಕರಾವಳಿ, ಹಳೇ ಮೈಸೂರು ಭಾಗ, ಬೆಂಗಳೂರು, ಉತ್ತರ ಕರ್ನಾಟಕ ಸೇರಿದಂತೆ 4 ರೀತಿಯ ಭಾಷೆಗಳನ್ನು ಕಾಣಬಹುದು. ನಮಗೆ ಎಲ್ಲದರ ಪರಿಚಯವೂ ಇದೆ. ಹಾಗೆಯೇ ಸಭಾಧ್ಯಕ್ಷರ ಭಾಷೆಯ ಬಗ್ಗೆಯೂ ನಕ್ಷೆ ಹಾಕಿಕೊಟ್ಟುಬಿಡಿ. ನೀವು ಮಾತನಾಡುವುದನ್ನು ನಾವು ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ. ಇಂಡಿಯನ್ ಇಂಗ್ಲಿಷ್, ಅಮೆರಿಕ ಇಂಗ್ಲಿಷ್ ಎಂಬ ಡಿಕ್ಷನರಿಗಳಿದ್ದಂತೆ, ಸ್ಪೀಕರ್ ಟು ಕನ್ನಡ ಎಂಬ ಆ್ಯಪ್ ಹಾಕಿ ಕೊಟ್ಟರೆ ಅನುಕೂಲವಾಗುತ್ತದೆ ಎಂದು ನಗೆಚಟಾಕಿ ಹಾರಿಸಿದರು.

ಈ ವೇಳೆ ಮಾತನಾಡಿದ ಖಾದರ್ ಅವರು, ಯತ್ನಾಳ್ ಪದೇ ಪದೇ ನನ್ನ ಕನ್ನಡ ಭಾಷೆ ಸರಿಪಡಿಸುತ್ತಾರೆ. ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು.‌ ಆದರೆ, ಅದು ನಮ್ಮ ಪ್ರೀತಿಯ ಭಾಷೆ. ಪ್ರೀತಿ, ಸೋದರತೆ ಸಾಮರಸ್ಯದ ಭಾಷೆ ಎಂದು ಹೇಳಿದರು.

ನಿಮ್ಮ ಸಮಸ್ಯೆಯನ್ನು ನೀಗಿಸುವುದಕ್ಕಾಗಿಯೇ ಸದನವನ್ನು ಡಿಜಿಟಲೈಸ್ ಮಾಡುವ ಪ್ರಸ್ತಾಪ ಇದೆ. ಶೀಘ್ರದಲ್ಲೇ ವಿಧಾನಸಭೆಯ ಸಚಿವಾಲಯವನ್ನು ಡಿಜಿಟಲೀಕರಣ ಮಾಡುತ್ತಿದ್ದೇವೆ. ಆಗ ನಿಮಗೆ ಪ್ರಯೋಜನವಾಗುವಂತೆ ಡಿಕ್ಷನರಿ ಕೊಡುತ್ತೇವೆ ಎಂದು ತಿಳಿಸಿದರು.

SCROLL FOR NEXT