ರಾಜ್ಯ

ಶಿಕ್ಷಕರಾದ ಸಚಿವ ಮಹದೇವಪ್ಪ: ಶಾಲಾ ಮಕ್ಕಳಿಗೆ ಜನಸಂಖ್ಯಾ ಸ್ಫೋಟ, ಪೌಷ್ಟಿಕಾಂಶ ಕುರಿತು ಬೋಧನೆ

Manjula VN

ಮೈಸೂರು: ಸಮಾಜ ಕಲ್ಯಾಣ ಇಲಾಖೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗುರುವಾರ ವರಕೋಡು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಶಾಲೆಯ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.

ಶಾಲೆಗೆ ದಿಢೀರ್ ಭೇಟಿ ನೀಡಿದ ಸಚಿವರು, ತರಗತಿಯೊಂದಕ್ಕೆ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಶಿಕ್ಷಕರಾದ ಸಚಿವರು, ಶಾಲಾ ಮಕ್ಕಳಿಗೆ ಜನಸಂಖ್ಯಾ ಸ್ಫೋಟ, ನಿರುದ್ಯೋಗ, ಪೌಷ್ಠಿಕಾಂಶದ ಕುರಿತು ಮಾಹಿತಿ ನೀಡಿದರು.

ಬಳಿಕ ಶಾಲೆಯಲ್ಲಿದ್ದ ಲ್ಯಾಬ್ ಗಳು, ಗ್ರಂಥಾಲಯ, ಶೌಚಾಲಯಗಳನ್ನು ಸಚಿವರು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರದ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ನಂತರ ಅಡುಗೆ ಕೋಣೆಗೆ ಭೇಟಿ ನೀಡಿ ನೈರ್ಮಲ್ಯ ಮಾನದಂಡಗಳನ್ನು ಪರಿಶೀಲಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾಗಿದ್ದ ಆಹಾರದ ರುಚಿಯನ್ನೂ ಕೂಡ ಪರಿಶೀಲಿಸಿದರು.

ಈ ವೇಳೆ ಶಾಲೆ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪೌಷ್ಟಿಕ ಕೈತೋಟ ನಿರ್ಮಿಸಿ, ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಿರುವ ಸೊಪ್ಪು, ತರಕಾರಿಗಳನ್ನು ಬೆಳೆಯಬೇಕು. ಈ ಮೂಲಕ ಮಕ್ಕಳಿಗೆ ಪ್ರತಿದಿನವೂ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲು ಕ್ರಮವಹಿಸಬೇಕು. ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುವುದು. ಕಲಿಕೆಯಿಂದ ಯಾವುದೇ ಮಕ್ಕಳು ವಂಚಿತರಾಗಬಾರದು. ಪ್ರತಿಯೊಬ್ಬರೂ ಶಿಕ್ಷಣದಿಂದ ಜ್ಞಾನವಂತರಾಗಿ ಸಮಾಜದಲ್ಲಿ ಉತ್ತಮವಾದ ಜೀವನ ನಡೆಸಬೇಕು ಎಂದು  ಜಿಪಂ ಸಿಇಒ ಗಾಯತ್ರಿ, ಸಮಾಜ ಕಲ್ಯಾಣ ಉಪನಿರ್ದೇಶಕ ರಂಗೇಗೌಡ ಮತ್ತು ಇತರರಿಗೆ ಸೂಚನೆ ನೀಡಿದರು.

ನೀರಿನ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಇಲಾಖೆಯು ಕ್ಯಾಂಪಸ್‌ನಲ್ಲಿ ಬೋರ್‌ವೆಲ್‌ಗಳನ್ನು ತೆರೆಯಲಾಗುತ್ತದೆ. ಗ್ರಂಥಾಲಯವನ್ನು ಸುಧಾರಿಸಿದರೆ, ಶೈಕ್ಷಣಿಕ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಸಹಕಾರಿಯಾಗುತ್ತವೆ ಎಂದು ಇದೇ ವೇಳೆ ಹೇಳಿದರು.

SCROLL FOR NEXT