ರಾಜ್ಯ

ಬೆಂಗಳೂರು: ಸರ್ವಿಸ್ ಅಪಾರ್ಟ್'ಮೆಂಟ್ ನಲ್ಲಿ ಕ್ಯಾಷಿಯರ್ ಹತ್ಯೆ

Manjula VN

ಬೆಂಗಳೂರು: ಹಳೆ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಸರ್ವಿಸ್‌ ಅಪಾರ್ಟ್‌ಮೆಂಟ್‌ನ ಕ್ಯಾಷಿಯರ್‌'ವೊಬ್ಬರನ್ನು ಅದೇ ಅಪಾರ್ಟ್‌ಮೆಂಟ್‌ನ ಹೌಸ್‌ಕೀಪಿಂಗ್ ಸಿಬ್ಬಂದಿ ಹತ್ಯೆ ಮಾಡಿರುವ ಘಟನೆ ಗುರುವಾರ ವರದಿಯಾಗಿದೆ.

ಗುರುವಾರ ಬೆಳಗ್ಗೆ 6.45ರ ಸುಮಾರಿಗೆ ಅಪಾರ್ಟ್‌ಮೆಂಟ್ ಸಿಬ್ಬಂದಿಗಳು ಜೆಬಿ ನಗರ ಪೊಲೀಸರಿಗೆ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಸುಭಾಷ್ ಬರ್ಮನ್ (25) ಹಾಗೂ ಆರೋಪಿಯನ್ನು ಅಭಿಷೇಕ್ ಎಂದು ಗುರ್ತಿಸಲಾಗಿದೆ. ಇಬ್ಬರೂ  ಪಶ್ಚಿಮ ಬಂಗಾಳದವರು ಎಂದು ತಿಳಿದುಬಂದಿದೆ.

ಆರೋಪಿ ಸುಭಾಷ್ ತಲೆಗೆ ಮರದ ಹಲಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಹತ್ಯೆಯನ್ನು ಕಳ್ಳತನ ಪ್ರಕರಣವೆಂದು ಬಿಂಬಿಸಲು ಯತ್ನ ನಡೆಸಿದ್ದಾನೆ. ಸ್ಥಳದಲ್ಲಿದ್ದ ಸಿಸಿಟಿವಿಯನ್ನೂ ಒಡೆದು ಹಾಕಿದ್ದಾನೆ.

ಕಳ್ಳತನ ಪ್ರಕರಣವೆಂದೇ ಪೊಲೀಸರೂ ಕೂಡ ಶಂಕಿಸಿದ್ದರು. ಆದರೆ, ವಿವರವಾದ ತನಿಖೆ ಬಳಿಕ ಇದೊಂದು ಕೊಲೆ ಎಂಬುದು ಖಚಿತವಾಗಿದೆ. ಇದೇ ವೇಳೆ ಸಿಬ್ಬಂದಿಗಳ ಕೈವಾಡವಿರುವ ಶಂಕೆಗಳೂ ವ್ಯಕ್ತವಾಗಿದೆ. ತನಿಖೆ ವೇಳೆ ಆರೋಪಿ ಅಭಿಷೇಕ್ ಎಂಬುದು ಖಚಿತವಾಗಿದೆ. ಆದರೆ, ಆರೋಪಿ ಇದೀಗ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಆರೋಪಿ ಬಂಧನದ ಬಳಿಕವೇ ಹತ್ಯೆಯ ಹಿಂದಿನ ಕಾರಣಗಳು ತಿಳಿದುಬರಲಿದೆ ಎಂದು ಡಿಸಿಪಿ (ಪೂರ್ವ) ಭೀಮಾಶಂಕರ್ ಎಸ್ ಗುಳೇದ್ ಹೇಳಿದ್ದಾರೆ. ಈ ಸಂಬಂಧ ಜೆಬಿ ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT