ರಾಜ್ಯ

ಕೈಗಾರಿಕೆಗಳ ಉತ್ತೇಜನಕ್ಕೆ ಆದ್ಯತೆ, ಹೊಸ ಕೈಗಾರಿಕಾ ನೀತಿ ಜಾರಿ ಮಾಡಲಾಗುವುದು: ಸಿದ್ದರಾಮಯ್ಯ

Ramyashree GN

ಬೆಂಗಳೂರು: ರಾಜ್ಯ ಸರ್ಕಾರವು ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ) ಆಯೋಜಿಸಿದ್ದ ‘ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

'ಈ ಹಿಂದೆ ನಮ್ಮ ಸರ್ಕಾರ ಜಾರಿಗೆ ತಂದ ಕೈಗಾರಿಕಾ ನೀತಿಗೆ ಉದ್ಯಮ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಅತ್ಯಂತ ಪ್ರಗತಿಪರ ಕೈಗಾರಿಕಾ ನೀತಿ ಎಂದು ಕರೆಯಲಾಗಿತ್ತು. ಹೀಗಾಗಿ, ನಮ್ಮ ಸರ್ಕಾರ ಶೀಘ್ರದಲ್ಲೇ ಕೈಗಾರಿಕೋದ್ಯಮಿಗಳು ಮತ್ತು ರಫ್ತುದಾರರೊಂದಿಗೆ ಚರ್ಚಿಸಿ ಹೊಸ ಮತ್ತು ಪ್ರಗತಿಪರ ಕೈಗಾರಿಕಾ ನೀತಿಯನ್ನು ಹೊರತರಲಿದೆ' ಎಂದು ಹೇಳಿದರು.

ಕೈಗಾರಿಕೆಗಳ ಉತ್ತೇಜನಕ್ಕೆ ತಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದ ಅವರು, ತ್ವರಿತ ಕೈಗಾರಿಕೀಕರಣದಿಂದ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ ಎಂದರು.

'ಕೈಗಾರಿಕಾ ಅಭಿವೃದ್ಧಿಯು ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಆರ್ಥಿಕ ಅಭಿವೃದ್ಧಿಯಿಂದಾಗಿ ನಂತರ ಜಿಡಿಪಿ ಮತ್ತು ದೇಶದಲ್ಲಿ ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುತ್ತದೆ. ಈ ಅಂಶಗಳು ದೇಶದಲ್ಲಿ ಉತ್ತಮ ಹೂಡಿಕೆಗೆ ಕಾರಣವಾಗುತ್ತವೆ' ಎಂದರು.

ಬೆಂಗಳೂರು ನಗರವು ಜ್ಞಾನ, ಐಟಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿ ಹೆಸರಾಗಿದೆ. ನಗರವು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಪ್ರಪಂಚದೊಂದಿಗೆ ಸ್ಪರ್ಧಿಸುವ ಮಟ್ಟದಲ್ಲಿದೆ. ಹೂಡಿಕೆ ವಿಷಯದಲ್ಲೂ ನಾವೇ ನಂಬರ್ 1 ಆಯ್ಕೆಯಾಗಿದ್ದೇವೆ, ಇದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಎಲ್ಲವೂ ಬೆಂಗಳೂರು ಕೇಂದ್ರಿತವಾಗದಂತೆ ನೋಡಿಕೊಳ್ಳಲು ರಾಜ್ಯದ 2-3ನೇ ಹಂತದ ನಗರಗಳಲ್ಲಿ ಕೈಗಾರಿಕೀಕರಣವನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ. ರಫ್ತುದಾರರು ಸೇರಿದಂತೆ ಹೂಡಿಕೆದಾರರಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

'ದೇಶದಲ್ಲಿಯೇ ಅತ್ಯುತ್ತಮ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಹೊಂದಲು ಸರ್ಕಾರ ಶ್ರಮಿಸಲಿದೆ ಎಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್, 'ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್'(Ease of Doing Business) ನೊಂದಿಗೆ ರಾಜ್ಯವು ಉದ್ಯಮ ಸ್ನೇಹಿ ವಾತಾವರಣವನ್ನು ಹೊಂದಿದೆ ಎಂದು ಹೇಳಿದರು.

'ಕೈಗಾರಿಕೆಗಳ ಬೆಳವಣಿಗೆಯನ್ನು ಉತ್ತೇಜಿಸಲು ಆಯ್ದ ಏಳು ವಲಯಗಳಲ್ಲಿ ವಿಷನ್ ಗ್ರೂಪ್‌ಗಳನ್ನು ರಚಿಸಲಾಗುವುದು. MSMES ಅನ್ನು ಬೆಂಬಲಿಸುವುದು ಮತ್ತು ಪ್ರೋತ್ಸಾಹಿಸುವುದು ಸರ್ಕಾರದ ಸಾಮಾಜಿಕ ಜವಾಬ್ದಾರಿಯಾಗಿದೆ. MSME ಗಳನ್ನು ಸಬಲೀಕರಣಗೊಳಿಸಲು ನಾವು ಟಾಟಾ ಟೆಕ್ನಾಲಜಿಯೊಂದಿಗೆ ಕೆಲಸ ಮಾಡುತ್ತೇವೆ' ಎಂದು ಅವರು ಹೇಳಿದರು.

SCROLL FOR NEXT