ರಾಜ್ಯ

ಸಂಸದೆ ಸುಮಲತಾ ಪತ್ರ, ಸಹಿ ನಕಲುಗೊಳಿಸಿ ದುರ್ಬಳಕೆ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ 

Srinivas Rao BV

ಬೆಂಗಳೂರು: ಸಂಸದೆ ಸುಮಲತಾ ಅವರ ಪತ್ರ, ಸಹಿಯನ್ನು ನಕಲುಗೊಳಿಸಿ  ದುರ್ಬಳಕೆ ಮಾಡಿಕೊಂಡ ವ್ಯಕ್ತಿಯೋರ್ವನನ್ನು ವಿಜಯನಗರ ಜಿಲ್ಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿರುವ ಸಂಸದೆ ಸುಮಲತಾ, 06.02.2023 ರಂದು ಅನಾಮಧೇಯ ಮಹಿಳೆಯೊಬ್ಬರನ್ನು ನನ್ನ ಆಪ್ತ ಕಾರ್ಯದರ್ಶಿಯಾಗಿ ನೇಮಕಾತಿಗೊಳಿಸಿರುವುದಾಗಿ ನನ್ನ ಪತ್ರ ಹಾಗೂ ನನ್ನ ಸಹಿಯನ್ನು ನಕಲಿಗೊಳಿಸಿ ದುರ್ಬಳಕೆ ಮಾಡಿ ನವದೆಹಲಿಯ ಸಂಸದರ ಅನುದಾನ ಕಚೇರಿಗೆ  ನೀಡಿರುವುದು ದಿನಾಂಕ: 27.03.2023 ರಂದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಕಚೇರಿಗೆ ಪತ್ರ ಬರೆದು ದೂರು ದಾಖಲು ಮಾಡಲಾಗಿದ್ದ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಇದರ ಜಾಲವನ್ನು ಪತ್ತೆ ಹಚ್ಚಿ ಇದರ ಮೂಲ ಆರೋಪಿಯಾದ ಉತ್ತರ ಕರ್ನಾಟಕ ಮೂಲದ ‘ಅನಂತ ಕೃಷ್ಣ ಭಟ್’ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲುಗೊಳಿಸಿ ಈಗಾಗಲೇ ಪೊಲೀಸ್ ವಶಕ್ಕೆ ಪಡೆದುಕೊಂಡಿರುತ್ತಾರೆ. ಅನಂತ್ ಕೃಷ್ಣ ಭಟ್ ಮತ್ತು ಇತರರ ಮೇಲೆ ಕಾನೂನು ಕ್ರಮ ತಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 

"ಪೊಲೀಸರು ವಶಕ್ಕೆ ಪಡೆದಿರುವ ಅನಂತ್ ಕೃಷ್ಣ ಭಟ್ ಹಲವು ನಾಯಕರ ಜೊತೆ ಫೋಟೋಗಳನ್ನೂ ತಗೆಸಿಕೊಂಡಿರುತ್ತಾರೆ. ಇತರರು ಕೂಡ ಅವನಿಂದ ಜಾಗೃತವಾಗಿ ಇರುವಂತೆ ಮನವಿ ಮಾಡಿಕೊಳ್ಳುವೆ ಈ ರೀತಿಯಾಗಿ ನಕಲಿ ಗೊಳಿಸಿರುವ ಬಗ್ಗೆ ಯಾವುದಾದರೂ ವ್ಯಕ್ತಿ ತಮಗೆ ಅನುಮಾನಾಸ್ಪದವಾಗಿ ಕಂಡಲ್ಲಿ ಮಂಡ್ಯ  ಜಿಲ್ಲಾಧಿಕಾರಿಗಳ ಕಚೇರಿಯ ಸಂಕೀರ್ಣದಲ್ಲಿರುವ ನನ್ನ ಸಂಸದರ ಕಚೇರಿಗೆ ಕೂಡಲೇ ಮಾಹಿತಿ ನೀಡಬೇಕೆಂದು ಕೋರುತ್ತೇನೆ" ಎಂದು ಸಂಸದೆ ಸುಮಲತಾ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದಾರೆ 
 

SCROLL FOR NEXT