ರಾಜ್ಯ

ಮುಂಗಾರು ಆಗಮನ: ಕೊಡಗಿನ ಕಾಫಿ ಎಸ್ಟೇಟ್‌ಗಳನ್ನು ದೈತ್ಯ ಆಫ್ರಿಕನ್ ಬಸವನ ಹುಳು ಕಾಟ!

Ramyashree GN

ಮಡಿಕೇರಿ: ಮುಂಗಾರು ಆಗಮನದೊಂದಿಗೆ, ಉತ್ತರ ಕೊಡಗಿನ ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮದ ಕಾಫಿ ಬೆಳೆಗಾರರು ಹಾನಿಕಾರಕ ಆಕ್ರಮಣಕಾರಿ ಪ್ರಭೇದಗಳ ವಿರುದ್ಧ ಹೋರಾಡುತ್ತಿದ್ದಾರೆ. ದೈತ್ಯ ಆಫ್ರಿಕನ್ ಬಸವನ ಹುಳುವ ಹಳ್ಳಿಯ ಬಹುಪಾಲು ಎಸ್ಟೇಟ್‌ಗಳನ್ನು ಆಕ್ರಮಿಸಿದೆ ಮತ್ತು ಕಾಫಿ ಬೆಳೆಗಾರರು ಈ ಕೀಟಗಳಿಂದ ಎಸ್ಟೇಟ್‌ಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

'ಮುಂಗಾರು ಪೂರ್ವ ಸಮಯದಲ್ಲಿ, ನಾನು ಕಾಫಿ ಗಿಡಗಳ ಮೇಲೆ ಒಂದೆರಡು ದೈತ್ಯ ಆಫ್ರಿಕನ್ ಬಸವನ ಹುಳುಗಳನ್ನು ಕಂಡೆ ಮತ್ತು ನಾನು ಅವುಗಳನ್ನು ತೆಗೆದುಹಾಕಿದೆ. ಇದೀಗ, ಎಸ್ಟೇಟ್‌ನಾದ್ಯಂತ ಈ ಕೀಟಗಳ ಸೈನ್ಯವೇ ತುಂಬಿದೆ ಮತ್ತು ಅವು ಬೆಳೆಗಳಾದ ಕಾಫಿ, ಕಾಳುಮೆಣಸು ಬಳ್ಳಿಗಳು ಮತ್ತು ಬಾಳೆಗಳನ್ನು ನಾಶಮಾಡುತ್ತಿವೆ' ಎಂದು ಕಾಫಿ ಬೆಳೆಗಾರ ಸುರೇಶ್ ಬಾಬು ಟಿಎನ್ಐಇಗೆ ತಿಳಿಸಿದರು.

ಬಸವನ ಹುಳುಗಳು ಎಲೆಗಳು ಮತ್ತು ಬಳ್ಳಿಗಳನ್ನು ತಿನ್ನುತ್ತದೆ. ಬಸವನಹುಳುಗಳು ಬೇಗನೆ ವೃದ್ಧಿಯಾಗುತ್ತಿದ್ದು, ಅವುಗಳನ್ನು ಹೋಗಲಾಡಿಸಲು ಯಾವುದೇ ಪರಿಹಾರ ಕಾಣುತ್ತಿಲ್ಲ ಎಂಬುದು ರೈತರ ಅಳಲು. 

'ನಾವು ಈಗ ಈ ಬಸವನ ಹುಳುವನ್ನು ಸಸ್ಯಗಳಿಂದ ತೆಗೆದುಹಾಕಲು ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದೇವೆ. ಆದರೆ, ಇದು ಅಸಹ್ಯಕರ ಕೆಲಸವಾಗಿದ್ದು, ಕೂಲಿಕಾರರಿಗೆ ಹೆಚ್ಚುವರಿ ಹಣ ನೀಡಬೇಕಾಗಿದೆ. ಈ ಬಸವನ ಹುಳುಗಳು ಲೋಳೆಯನ್ನು ಹೊಂದಿರುವ ಕಾರಣ ಹೆಚ್ಚಿನ ಕಾರ್ಮಿಕರು ಈ ಕಾರ್ಯವನ್ನು ಕೈಗೊಳ್ಳಲು ಬಯಸುವುದಿಲ್ಲ' ಎಂದು ಮತ್ತೊಬ್ಬ ಬೆಳೆಗಾರ ಕುಮಾರ್ ಹೇಳಿದರು.

ಐದು ವರ್ಷಗಳಿಂದ ಮಳೆಗಾಲದಲ್ಲಿ ಪ್ರತಿ ವರ್ಷ ಎಸ್ಟೇಟ್‌ಗಳಾದ್ಯಂತ ಈ ಬಸವನ ಹುಳುಗಳ ಹಾವಳಿ ವರದಿಯಾಗುತ್ತಿವೆ ಎಂದು ನಿವಾಸಿಗಳು ವಿವರಿಸಿದರು. ಹಿಂದಿನ ವರ್ಷಗಳಲ್ಲಿ ಸರ್ಕಾರ ಒಂದಿಷ್ಟು ಪರಿಹಾರ ಮತ್ತು ಧನಪರಿಹಾರ ನೀಡಿದ್ದರೂ ಈಗ ಆ ಸ್ಥಿತಿ ಇಲ್ಲ ಎನ್ನುತ್ತಾರೆ ಮತ್ತೊಬ್ಬ ಕಾಫಿ ಬೆಳೆಗಾರ.

'ಈ ಸಮಸ್ಯೆಗೆ ವೈಜ್ಞಾನಿಕ ಪರಿಹಾರದ ಅಗತ್ಯವಿದೆ. ಸಂತ್ರಸ್ತ ಬೆಳೆಗಾರರಿಗೆ ಸರ್ಕಾರದ ಬೆಂಬಲವು ಈ ಸಮಯದ ಅಗತ್ಯವಾಗಿದ್ದರೂ ಸಹ, ಕಾಫಿ ಮಂಡಳಿಯ ವಿಜ್ಞಾನಿಗಳು ಈ ಬಸವನ ಹುಳುಗಳನ್ನು ಎಸ್ಟೇಟ್‌ಗಳಿಂದ ತೊಡೆದುಹಾಕಲು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು' ಎಂದು ಕುಮಾರ್ ಹೇಳುತ್ತಾರೆ.

SCROLL FOR NEXT