ರಾಜ್ಯ

ವೃದ್ದೆ ಮೇಲೆ ಹಲ್ಲೆ, ದರೋಡೆ; ನರ್ಸ್ ಬಂಧನ

Manjula VN

ಬೆಂಗಳೂರು: ವೃದ್ದೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರ ದೋಟಿ ಪರಾರಿಯಾಗಿದ್ದ ನರ್ಸ್ ಒಬ್ಬರನ್ನು ನಂದಿನಿ ಲೇಔಟ್ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.

ಲಕ್ಷ್ಮಿ ಅಲಿಯಾಸ್ ಗಂಗಾ (38) ಬಂಧಿತ ನರ್ಸ್. ಶಾಂತಮ್ಮ ಹಲ್ಲೆ ಹಾಗೂ ದರೋಡೆಗೆ ಒಳಗಾದ ವೃದ್ಧ ಮಹಿಳೆಯಾಗಿದ್ದಾರೆ.

ಶಾಂತಮ್ಮ ಅವರು ಲಗ್ಗೆರೆಯಲ್ಲಿ ತಮ್ಮ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಬಾಡಿಗೆ ಮನೆಗಳ ಬಗ್ಗೆ ವಿಚಾರಿಸುವ ನೆಪದಲ್ಲಿ ಮಹಿಳೆಯೊಬ್ಬರು ಹಲವು ಬಾರಿ ಶಾಂತಮ್ಮ ಅವರನ್ನು ಸಂಪರ್ಕಿಸಿದ್ದಾರೆ. ಮೇ 25ರಂದು ಮತ್ತೆ ಮನೆಗೆ ಬಂದ ಮಹಿಳೆ ದೊಣ್ಣೆಯಿಂದ ಹೊಡೆದು ಧರಿಸಿದ್ದ ಚಿನ್ನದ ಸರ ದೋಚಿ, ಪರಾರಿಯಾಗಿದ್ದಳು.

ಶಾಂತಮ್ಮ ಅವರ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಕೊನೆಗೂ ಆರೋಪಿತ ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧನದ ವೇಳೆ ಕಳವು ಮಾಡಿದ್ದ 80 ಸಾವಿರ ಮೌಲ್ಯದ 20 ಗ್ರಾಂ ಚಿನ್ನದ ಸರ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಗಂಗಾ, ಕೋರಮಂಗಲದ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಈ ವರ್ಷದ ಆರಂಭದಲ್ಲಿ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ನಿದ್ರೆ ಬರುವ ಚುಚ್ಚುಮದ್ದು ನೀಡಿ, ಚಿನ್ನದ ಸರವನ್ನು ಕದ್ದಿದ್ದಳು. ಅಶೋಕನಗರ ಪೊಲೀಸರು ಆಕೆಯನ್ನು ಬಂಧನಕ್ಕೊಳಪಡಿಸಿದ್ದರು. ನಂತನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT