ರಾಜ್ಯ

ಹಾಸನ: ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ, ವಾರದಲ್ಲಿ 2ನೇ ಪ್ರಕರಣ

Srinivasamurthy VN

ಹಾಸನ: ಗುಂಪೊಂದರ ಹಲ್ಲೆಯಿಂದ ಯುವಕನನ್ನು ತಡೆದು ಜಗಳ ಬಿಡಿಸಲು ಹೋಗಿದ್ದ ಪೊಲೀಸ್ ಪೇದೆಯೊಬ್ಬರ ಮೇಲೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಹೊಳೆನರಸಿಪುರದ ಮಳಲಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಯಸಳೂರು ಪೊಲೀಸ್ ಠಾಣೆಯ ಪೇದೆ, ಕುಂದೂರು ಹೋಬಳಿ ಎಸ್. ಹೊನ್ನೇನಹಳ್ಳಿ ಗ್ರಾಮದ ನಿವಾಸಿ ಶರತ್ ತೀವ್ರ ಹಲ್ಲೆಗೊಳಗಾಗಿದ್ದಾರೆ. 

ಮೂಲಗಳ ಪ್ರಕಾರ ಶರತ್ ಅವರು ಜೂ. 15 ರಂದು ಸಾಂದರ್ಭಿಕ ರಜೆ ಪಡೆದು ತಮ್ಮ ಗ್ರಾಮದ ದೀಪಕ್ ಎಂಬುವವರ ಮಗಳ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಳಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನದ ಬಳಿಯಿರುವ ಕನ್ವೆನ್ಷನ್ ಹಾಲ್ ಎದುರು ಚೇತನ್ ಎಂಬ ಯುವಕನ ಮೇಲೆ ಗ್ರಾಮದ ಯುವಕರ ಗುಂಪೊಂದು ಹಲ್ಲೆ ನಡೆಸುತ್ತಿತ್ತು.

ಈ ವೇಳೆ ಜಗಳ ಬಿಡಿಸಲು ಹೋಗಿದ್ದ ಶರತ್ ಅವರ ಮೇಲೆ ಯುವಕರ ಗುಂಪು ಮುಗಿಬಿದ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಹಲ್ಲೆಯಿಂದ ಶರತ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಕೋಣೆಯ ಒಳಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದುಷ್ಕರ್ಮಿಗಳ ತಂಡ ದೈಹಿಕವಾಗಿ ಹಲ್ಲೆ ನಡೆಸುವುದು, ಶರತ್ ಅವರತ್ತ ಕಲ್ಲುಗಳನ್ನು ಎಸೆಯುವುದು, ಮಚ್ಚಿನಿಂದ ಬೀಸುವುದು, ಪ್ಲಾಸ್ಟಿಕ್ ಕುರ್ಚಿಯಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ಶರತ್ ನೆಲಕ್ಕೆ ಬಿದ್ದ ನಂತರ ಅವರ ದೇಹದ ಮೇಲೆ ಹತ್ತಿ ಕ್ರೂರವಾಗಿ ಕುಣಿಯಲಾರಂಭಿಸಿದ್ದಾರೆ. 

ತೀವ್ರವಾಗಿ ಗಾಯಗೊಂಡಿರುವ ಪೋಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮಿಥುನ್, ಲೋಹಿತ್, ನಟರಾಜು ಹಾಗೂ ಇತರರ ಗುಂಪು ಹಲ್ಲೆ ನಡೆಸಿದ್ದು ಹೊಳೆನರಸಿಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನುಬಂಧಿಸಿದ್ದಾರೆ. ತೀವ್ರ ಗಾಯಗೊಂಡಿರುವ ಶರತ್ ಅವರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪೊಲೀಸರ ಮೇಲೆ ಕರ್ನಾಟಕದಲ್ಲಿ ನಡೆದ ಎರಡನೇ ದೌರ್ಜನ್ಯ ಘಟನೆ ಇದಾಗಿದೆ. ಇದಕ್ಕೂ ಮರಳು ಮಾಫಿಯ ತಡೆಯಲು ಹೋಗಿದ್ದ ಪೊಲೀಸ್ ಪೇದೆ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲ್ಲಲಾಗಿತ್ತು. 
 

SCROLL FOR NEXT