ಬೆಂಗಳೂರು: ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಮರುವಿಂಗಡನೆ ಮತ್ತು ಮೀಸಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ 10 ವಾರಗಳ ಕಾಲಾವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬಾಕಿ ಉಳಿದಿರುವ ಅರ್ಜಿಯನ್ನು ಅಡ್ವೊಕೇಟ್ ಜನರಲ್ ಇಂದು ಪ್ರಸ್ತಾಪಿಸಿದರು. ಮರುವಿಂಗಡನೆ ಮತ್ತು ಮೀಸಲಾತಿ ಪಟ್ಟಿಗಳನ್ನು ಮರುಪರಿಶೀಲಿಸಲು ಮತ್ತು ಅಧಿಸೂಚನೆಗಳನ್ನು ಹೊರಡಿಸಲು ಇಂದಿನಿಂದ 10 ವಾರಗಳ ಕಾಲಾವಕಾಶವನ್ನು ಕೋರಿದರು.
10 ವಾರಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ಗಳ ಮರುವಿಂಗಡನೆ ಮತ್ತು ಮೀಸಲಾತಿಯ ಅಗತ್ಯ ಅಧಿಸೂಚನೆಗಳನ್ನು ಒದಗಿಸುವಂತೆ ಮತ್ತು ಅನುಸರಣೆ ವರದಿಯನ್ನು ಸಲ್ಲಿಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿದ್ದು, ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಕಸರತ್ತು: ಹೆಚ್ಚಿನ ವಾರ್ಡ್ಗಳ ಸೃಷ್ಟಿ ಇಲ್ಲ- ಬಿಬಿಎಂಪಿ ಮುಖ್ಯಸ್ಥ
ಇನ್ನು ಅರ್ಜಿಯ ವಿಚಾರಣೆಯನ್ನು 11 ವಾರಗಳ ನಂತರ ಪಟ್ಟಿ ಮಾಡುವಂತೆ ಸೂಚಿಸಲಾಗಿದೆ. 2021ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗೆ SEC ತಯಾರಿ ನಡೆಸಿತ್ತು.
ಈ ಮಧ್ಯೆ ಎಸ್ಇಸಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು, ರಾಜ್ಯವನ್ನು ಆಳುತ್ತಿದ್ದ ಬಿಜೆಪಿ ಸರ್ಕಾರವು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ಮಾಡಿತು. ಕ್ಷೇತ್ರಗಳನ್ನು ಮರುವಿಂಗಡನೆ ಮತ್ತು ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸುವ ಆಯೋಗದ ಅಧಿಕಾರವನ್ನು ಹಿಂತೆಗೆದುಕೊಂಡಿತು. ಪ್ರಕ್ರಿಯೆ ನಡೆಸಲು ರಾಜ್ಯವು ಹೊಸ ಸಮಿತಿಯನ್ನು ರಚಿಸಿದೆ.