ರಾಜ್ಯ

ಗದಗ: ಬಸ್ ಸೌಲಭ್ಯವಿಲ್ಲದೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಟ್ರ್ಯಾಕ್ಟರ್, ಆಟೋಗಳಲ್ಲಿ ಬರುತ್ತಿರುವ ವಿದ್ಯಾರ್ಥಿಗಳು

Ramyashree GN

ಗದಗ: ಜಿಲ್ಲೆಯ ರಾನ್ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಸುಮಾರು 400 ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಂದ 60 ಕಿಮೀ ದೂರದಲ್ಲಿರುವ ತಮ್ಮ ಪರೀಕ್ಷಾ ಕೇಂದ್ರವನ್ನು ತಲುಪಲು ಕಷ್ಟಪಡುತ್ತಿದ್ದಾರೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಬಸ್‌ ಸೌಲಭ್ಯವಿಲ್ಲ. 

2017ರವರೆಗೆ ಹೊಳೆಆಲೂರಿನ ಕಲ್ಮೇಶ್ವರ ಕಾಲೇಜು, ಮೆಣಸಗಿಯ ಯಚ್ಚ್ರೇಶ್ವರ ಕಾಲೇಜು, ಕೊಣ್ಣೂರಿನ ಲಿಂಗ ಬಸವೇಶ್ವರ ಸರ್ವೋದಯ ಕಾಲೇಜು ಮತ್ತು ಶಿರೋಳ ಗ್ರಾಮದ ಕೆಎಸ್‌ಎಸ್ ಶಿರೋಳ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಈಗ ಪರೀಕ್ಷಾ ಕೇಂದ್ರವನ್ನು ರಾನ್ ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ.

ಕೆಲವು ಗ್ರಾಮಗಳಿಗೆ ಬೆಳಗ್ಗೆ 6 ಗಂಟೆಗೆ ಹಾಗೂ 10 ಗಂಟೆಯ ನಂತರ ಬಸ್ ಸಂಚಾರವಿದ್ದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಬೆಳಿಗ್ಗೆ 5.30ಕ್ಕೆ ಮನೆಯಿಂದ ಹೊರಡಬೇಕು ಮತ್ತು ಪರೀಕ್ಷಾ ಕೇಂದ್ರ ತೆರೆಯುವ 10.30 ರವರೆಗೆ ಕಾಯಬೇಕು. ಈ ಸಮಸ್ಯೆಯಿಂದಾಗಿ ಪೋಷಕರು ದ್ವಿಚಕ್ರವಾಹನದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡುತ್ತಿದ್ದಾರೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ಆಟೋರಿಕ್ಷಾ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.

ಕೆಲವು ವಿದ್ಯಾರ್ಥಿಗಳು ಮಾತನಾಡಿ, 'ಪರೀಕ್ಷಾ ಕೇಂದ್ರವನ್ನು ತಲುಪಲು ನಾವು ಟ್ರ್ಯಾಕ್ಟರ್ ಅಥವಾ ಆಟೋರಿಕ್ಷಾಗಳ ಮೂಲಕ ಪ್ರಯಾಣಿಸಬೇಕಾಗಿದೆ. ಕೇಂದ್ರವನ್ನು ತಲುಪಲು ಸುಮಾರು ಎರಡು ಗಂಟೆ ತೆಗೆದುಕೊಳ್ಳುತ್ತದೆ. ಕೇಂದ್ರವನ್ನು ರಾನ್ ಪೇಟೆಗೆ ಸ್ಥಳಾಂತರಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಪರಿಗಣಿಸಬೇಕು. ಆದಷ್ಟು ಬೇಗ ಕೆಲಸ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ' ಎಂದರು.

ಪೋಷಕರಾದ ಉದಯ್ ಡಂಬಳ ಮತ್ತು ಫಕೀರೇಶ ಗೋಡಿ ಮಾತನಾಡಿ, 'ನಮಗೆ ಬೆಳಗ್ಗೆ 6 ಗಂಟೆಗೆ ಬಸ್ ಇದೆ. ಅದು ತುಂಬಾ ಬೇಗ. ಮುಂದಿನ ಬಸ್ 10 ಗಂಟೆಗೆ ಇದ್ದು, ಇದು ವಿದ್ಯಾರ್ಥಿಗಳಿಗೆ ತುಂಬಾ ತಡವಾಗಿದೆ. ಪರೀಕ್ಷಾ ಕೇಂದ್ರಕ್ಕೆ ಬರಲು ಹರಸಾಹಸ ಪಡಬೇಕಾಗಿದೆ' ಎನ್ನುತ್ತಾರೆ.

ಗದಗದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ. ಕರಿಬಸಪ್ಪ ಮಾತನಾಡಿ, 'ನಾನು ಒಂದೂವರೆ ತಿಂಗಳ ಹಿಂದೆ ಗದಗದಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಈ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ' ಎಂದರು.

SCROLL FOR NEXT