ರಾಜ್ಯ

ಪ್ರಚಾರದ ವೇಳೆ ಜನರಿಗೆ ಉಡುಗೊರೆ ನೀಡುವ ಬದಲು ಆರೋಗ್ಯ ತಪಾಸಣೆಗಳ ನಡೆಸಿ: ರಾಜಕೀಯ ನಾಯಕರಿಗೆ ತಜ್ಞರ ಸಲಹೆ

Manjula VN

ಬೆಂಗಳೂರು: ಚುನಾವಣಾ ಹೊಸ್ತಿಲಿನಲ್ಲಿರುವ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ರಾಜಕೀಯ ನಾಯಕರು, ಜನರಿಗೆ ಉಡುಗೊರೆಗಳ ನೀಡುವ ಬದಲು ಹೃದ್ರೋಗ, ಮಧುಮೇಹ ಮತ್ತು ನೆಫ್ರಾಲಜಿ ಕ್ಷೇತ್ರದ ಆರೋಗ್ಯ ವೃತ್ತಿಪರರೊಂದಿಗೆ ಉಚಿತ ಆರೋಗ್ಯ ತಪಾಸಣೆಗಳ ನಡೆಸಿ ಎಂದು ರಾಜಕೀಯ ನಾಯಕರಿಗೆ ತಜ್ಞರು ಸಲಹೆ ನೀಡಿದ್ದಾರೆ.

ಕಿಡ್ನಿ ವಾರಿಯರ್ಸ್ ಅಸೋಸಿಯೇಷನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮತ್ತು ಇಂಡಿಯನ್ ಸೊಸೈಟಿ ಆಫ್ ನೆಫ್ರಾಲಜಿ (ಐಎಸ್‌ಎನ್) ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ವೃತ್ತಿಪರರು ಹೃದಯ ಸ್ತಂಭನ, ಮೂತ್ರಪಿಂಡ ವೈಫಲ್ಯ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡಗಳು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುವ ಕಾಯಿಲೆಗಳಾಗಿವೆ. ರಕ್ತದೊತ್ತಡ-ಮಧುಮೇಹ ಪರಸ್ಪರ ಸಂಬಂಧ ಹೊಂದಿದೆ. ಆರಂಭಿಕ ಹಂತದಲ್ಲಿ ರೋಗನಿರ್ಣಯ ಮಾಡಿದರೆ ಅವುಗಳಿಂದ ಎದುರಾಗುವ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ.

ಕರ್ನಾಟಕ ರಿಸರ್ಚ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ (ಕೆಆರ್‌ಎಸ್‌ಎಸ್‌ಡಿಐ) ಅಧ್ಯಕ್ಷ, ಮಧುಮೇಹ ತಜ್ಞ ಡಾ.ಮನೋಹರ್ ಕೆ.ಎನ್ ಅವರು ಮಾತನಾಡಿ, ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಮಧುಮೇಹವೇ ದೊಡ್ಡ ಕಾರಣ. ಅತೀ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿರುವ ದೇಶಗಳ ಪೈಕಿ ಚೀನಾದ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ವಿಶ್ವದಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಆದ್ದರಿಂದ ರಕ್ತ/ಸಕ್ಕರೆ ಮಟ್ಟಗಳಂತಹ ನಿಯತಾಂಕಗಳನ್ನು ನಿಯಮಿತವಾಗಿ ಗಮನಿಸುವುದು ಮುಖ್ಯ ಎಂದು ಹೇಳಿದ್ದಾರೆ.

ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ, ಮೂತ್ರ ಮತ್ತು ಕ್ರಿಯೇಟಿನೈನ್ ಪರೀಕ್ಷೆಗಳಿಗೆ ಸರ್ಕಾರಿ ಸ್ವಾಮ್ಯದ ಆರೋಗ್ಯ ಕೇಂದ್ರಗಳಲ್ಲಿ ಸುಮಾರು ರೂ.500 ವೆಚ್ಚಾಗುತ್ತದೆ. ಆದರೆ, ದೊಡ್ಡ ಪ್ರಮಾಣದ ಜನಸಂಖ್ಯೆಗೆ ಪರೀಕ್ಷೆ ನಡೆಸಿದರೆ ವೆಚ್ಚ ಮತ್ತಷ್ಟು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಬ್ಲೂಮ್ ವ್ಯಾಲ್ಯೂ ಕಾರ್ಪೊರೇಶನ್‌ನ ಸಲಹೆಗಾರ ನೆಫ್ರಾಲಜಿಸ್ಟ್ ಡಾ.ಅರವಿಂದ ಕನೀವರನ್ ಮಾತನಾಡಿ, ಭಾರತದಲ್ಲಿ ಜನರು ನಿಯಮಿತ ಆರೋಗ್ಯ ತಪಾಸಣೆಯ ಪರಿಕಲ್ಪನೆಯನ್ನು ಹೊಂದಿಲ್ಲ ಮತ್ತು ಕುಟುಂಬ ವೈದ್ಯರನ್ನು ಹೊಂದಿಲ್ಲ. ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಮಾತ್ರ ಜನರು ವೈದ್ಯರನ್ನು ಭೇಟಿ ಮಾಡುತ್ತಾರೆಂದು ಹೇಳಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ನಮ್ಮ ಚಿಕಿತ್ಸಾಲಯಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇದಕ್ಕೆ ವೈದ್ಯ ಅರವಿಂದ್ ಕನೀವರನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

SCROLL FOR NEXT