ರಾಜ್ಯ

ಗಾಯದಿಂದ ಚೇತರಿಸಿಕೊಂಡ ಪರಮೇಶ್ವರ್: ಕಲ್ಲೇಟು ಬಿದ್ದ ಸ್ಥಳದಿಂದಲೇ ಮರಳಿ ಚುನಾವಣಾ ಪ್ರಚಾರ ಆರಂಭ!

Manjula VN

ತುಮಕೂರು: ಗಾಯದಿಂದ ಚೇತರಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ ಅವರು, ಕಲ್ಲೇಟು ಬಿದ್ದ ಬೈರೇನಹಳ್ಳಿಯಿಂದಲೇ ಭಾನುವಾರ ಮರಳಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.

ಪ್ರಚಾರದ ವೇಳೆ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಅವರು, ಯಾರು ಏನೇ ಹುನ್ನಾರ ನಡೆಸಿದ್ರೂ, ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತೆ ಗೆಲುವು ಸಾಧಿಸಲಿದೆ. ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿದರು.

ಸೋಲುವ ಆತಂಕ ಇರುವುದು ವಿರೋಧ ಪಕ್ಷದವರಿಗೆ ಮಾತ್ರ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಶಾಂತಿ ಕದಡಬಾರದು. ಕಿಡಿಗೇಡಿಗಳು ಶಾಂತಿ ಕದಡುವ ಹುನ್ನಾರ ನಡೆಸಿದರೆ, ನೀವು ಮತ ಹಾಕುವ ಮೂಲಕ ಅವರಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ಮನವಿ ಮಾಡಿದರು.

ಇದೇ ವೇಳೆ ಘಟನೆಯನ್ನು ನಾಟಕ ಎಂದು ಕರೆದಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾಟಕಗಳ ಅವರಿಗೆ ಬಗ್ಗೆ ಹೆಚ್ಚು ತಿಳಿದಿರಬಹುದು, ನಾನು ಎಂದಿಗೂ ಸಹಾನುಭೂತಿ ಪಡೆಯಲು ಕಣ್ಣೀರು ಹಾಕಿಲ್ಲ. ಅದರ ಅಗತ್ಯವೂ ನನಗಿಲ್ಲ ಎಂದು ಹೇಳಿದರು.

ಬೈರೇನಹಳ್ಳಿ ಗೇಟ್‌ ಬಳಿ ಡಾ.ಜಿ.ಪರಮೇಶ್ವರ್‌ ಶುಕ್ರವಾರ ಸಂಜೆ ಚುನಾವಣೆ ಪ್ರಚಾರ ನಡೆಸುತ್ತಿದ್ದ ವೇಳೆ ಹೂವಿನ ಜೊತೆಗೆ ಕಲ್ಲು ತೂರಿ ಬಂದು ತಲೆಗೆ ಬಡಿದಿತ್ತು.

SCROLL FOR NEXT