ರಾಜ್ಯ

ಆಂಜನೇಯನಿಗೂ ಭಜರಂಗ ದಳಕ್ಕೂ ಸಂಬಂಧವೇ ಇಲ್ಲ... ಸಂಘಟನೆ ನಿಷೇಧದಿಂದ ಹಿಂದೆ ಸರಿಯುವ ಮಾತೇ ಇಲ್ಲ..: ಡಿಕೆ ಶಿವಕುಮಾರ್

Srinivasamurthy VN

ಬೆಂಗಳೂರು: ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಅಧಿಕಾರಕ್ಕೆ ಬರುತ್ತಿದ್ದಂತೆ ಭಜರಂಗದಳ (Bajarangadala) ನಿಷೇಧ ಮಾಡೇ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿನ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಕರ್ನಾಟಕ ಕಾಂಗ್ರೆಸ್‌ (Karnataka Congress) ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಕುರಿತು ಘೋಷಣೆ ಮಾಡುತ್ತಲೇ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾಂಗ್ರೆಸ್ ಘೋಷಣೆ ಮಾಡಿದ್ದೇ ತಡ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯೇ ಸೃಷ್ಟಿಯಾಗಿದೆ.

ಕಾಂಗ್ರೆಸ್‌ನ ಈ ನಿಲುವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ(BJP), ತಾಕತ್ತಿದ್ದರೆ ನಿಷೇಧಿಸಲಿ ಎಂದು ಸವಾಲೊಡ್ಡಿದೆ.  ಇದಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ನಾವು ಹಿಂದೆ ಸರಿಯಲ್ಲ, ಅಧಿಕಾರಕ್ಕೆ ಬರುತ್ತಿದ್ದಂತೆ ಭಜರಂಗದಳ (Bhajaranga dala) ನಿಷೇಧ ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ.

ಭಜರಂಗದಳಕ್ಕೂ ಆಂಜನೇಯನಿಗೂ ಏನು ಸಂಬಂಧ?
ಭಜರಂಗ ದಳಕ್ಕೂ ಹನುಮಂತನಿಗೂ ಏನು ಸಂಬಂಧ. ಹನುಮಂತನೇ ಬೇರೆ, ಭಜರಂಗ ದಳವೇ ಬೇರೆ. ಭಜರಂಗ ದಳಕ್ಕೂ ಹನುಮಂತನಿಗೂ ಸಂಬಂಧವೇ ಇಲ್ಲ.. ಭಜರಂದ ದಳ ಸಂಘಟನೆ ಕಾನೂನಿನ ವ್ಯವಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಕಾನೂನು ಸುವ್ಯವಸ್ಥೆಗೂ ಅದರಿಂ ಧಕ್ಕೆ ಆಗುತ್ತಿದೆ. ನೈತಿಕ ಪೊಲೀಸ್‌ಗಿರಿಯನ್ನೂ ಮಾಡಿ ಸಮಾಜದ ಶಾಂತಿಗೆ ಧಕ್ಕೆ ತರುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಅಂತೆಯೇ ವಿನಾ ಕಾರಣ ಬಿಜೆಪಿ ನಮ್ಮ ಪ್ರಣಾಳಿಕೆ ಅಂಶಗಳಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ. ನಾವು ಏನು ಹೇಳಿದ್ದೇವೋ ಅದನ್ನು ಸರಿಯಾಗಿ ಓದಿ. ಆಂಜನೇಯ ಓರ್ವ ಸೇವಕ. ನಾವೆಲ್ಲ ಆಂಜನೇಯನ ಪ್ರವೃತ್ತಿಯವರು. ಸುಮ್ನೆ ಆಂಜನೇಯನ ಹೆಸರಿಟ್ಟುಕೊಂಡು ಭಜರಂಗ ದಳಕ್ಕೂ ಲಿಂಕ್‌ ಮಾಡಿದ್ರೆ ಹೇಗೆ? ಭಜರಂಗಿ ಅಂತ ಕ್ಯಾಂಪೇನ್‌ ಮಾಡೋದಲ್ಲ, ಹೊಟ್ಟೆಗೆ ಏನು ಕೊಟ್ರಿ ಅನ್ನೋದು ಮುಖ್ಯ. ಉದ್ಯೋಗ ಏನು ಕೊಟ್ಟರು, ಹೂಡಿಕೆ ಏನು ಮಾಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ನಮ್ಮ ಪ್ರಣಾಳಿಕೆಯಿಂದ ಭಜರಂಗದಳ ನಿಷೇಧ ಪ್ರಸ್ತಾಪವನ್ನು ಹಿಂದೆ ಪಡೆಯುವುದೇ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

SCROLL FOR NEXT