ರಾಜ್ಯ

ಶೋಭಾ ಕರಂದ್ಲಾಜೆ ಅವರೇ ಶೂರ್ಪನಖಿ ಆಗಬೇಡಿ, ಸೀತಾಮಾತೆಯಾಗಿ: ಆ್ಯಂಬುಲೆನ್ಸ್ ವಿಚಾರಕ್ಕೆ ರಮೇಶ್ ಬಾಬು ತಿರುಗೇಟು

Shilpa D

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಐದೇ ದಿನ ಬಾಕಿ ಇದೆ. ಈ ವೇಳೆ ಘಟಾನುಘಟಿ ನಾಯಕರು ಪ್ರಚಾರ ಕೈಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋಗೆ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್‌ ಬಿಟ್ಟು ತೊಂದರೆ ಕೊಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಕ್ಕೆ ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ತಿರುಗೇಟು ನೀಡಿದ್ದಾರೆ

ಶೋಭಾ ಕರಂದ್ಲಾಜೆ ಅವರೇ ನೀವು ಕರ್ನಾಟಕ ರಾಜಕಾರಣದಲ್ಲಿ ಸೀತಾ ಮಾತೆ ಪಾತ್ರವನ್ನು ಮಾಡಿ. ಶೂರ್ಪನಖಿ ಪಾತ್ರ ಮಾಡಬೇಡಿ. ರಾಜ್ಯದ ಜನರಿಗೆ ಏನು ಅನುಕೂಲ ಆಗುತ್ತದೆಯೋ ಆ ಕೆಲಸವನ್ನು ನೀವು ಮಾಡಿ. ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋದಿಂದ ನಿಮಗೆ ಯಾವುದೇ ತೊಂದರೆ ಆಗದೇ ಇರಬಹುದು. ಆದರೆ, ಇದರಿಂದ ಬೀದಿ ವ್ಯಾಪಾರಸ್ಥರಿಗೆ ಸಮಸ್ಯೆ ಆಗಲಿದೆ. ಚಿಕ್ಕಪುಟ್ಟ ಸಹಿತ ಅಂಗಡಿ ಇಟ್ಟುಕೊಂಡವರಿಗೆ ಸಮಸ್ಯೆಯಾಗುತ್ತದೆ ಎಂದು ರಮೇಶ್ ಬಾಬು ಕಿಡಿಕಾರಿದ್ದಾರೆ.

ನರೇಂದ್ರ ಮೋದಿ ರೋಡ್ ಶೋ ದಾರಿಯಲ್ಲಿ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್ ತಂದು ಸೀನ್‌ ಕ್ರಿಯೇಟ್ ಮಾಡಲು ಹೊರಟಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಕಳೆದ ಬಾರಿ ನರೇಂದ್ರ ಮೋದಿ ರೋಡ್ ಶೋ ಆದ ಕಡೆಗಳಲ್ಲಿ ಆಂಬ್ಯುಲೆನ್ಸ್ ಸಮಸ್ಯೆ ಆಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಜನರಿಗೆ ಸಮಸ್ಯೆ ಆಗಬಾರದು ಎಂದು ಗುರುವಾರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಆದರೆ, ಇದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತುಂಬ ಚೆನ್ನಾಗಿ ತಿರುಚುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಿಮ್ಮ ಈ ಕೌಶಲ್ಯವನ್ನು ನೋಡಿಯೇ ಬಿಜೆಪಿಯಲ್ಲಿ ಚುನಾವಣಾ ಉಸ್ತುವಾರಿಯನ್ನಾಗಿ ಮಾಡಿದ್ದಾರೆ‌. ರೋಡ್‌ ಶೋ ವೇಳೆ ಅಂಗಡಿಗಳನ್ನು‌ ಮುಚ್ಚುವುದರಿಂದ ಜನರಿಗೆ ಸಮಸ್ಯೆ ಆಗಲಿದೆ‌.

ಈ ರೋಡ್‌ ಶೋದಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬ ಬಗ್ಗೆ ಶೋಭಾ ಕರಂದ್ಲಾಜೆ ಅವರು ಒಬ್ಬ ಕ್ಯಾಬಿನೆಟ್ ಸಚಿವರಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಲಹೆ ಕೊಡಲಿ ಎಂದು ಹೇಳಿದ ರಮೇಶ್‌ ಬಾಬು, ಪ್ರಧಾನ ಮಂತ್ರಿ ಅವರಿಗೆ ಇರುವ ಶಿಷ್ಟಾಚಾರವು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

SCROLL FOR NEXT