ನವದೆಹಲಿ: ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸಿದ್ದು, ರೋಡ್ ಶೋ ಪರಿಣಾಮ ನಗರದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಮೋದಿಯವರನ್ನು 'ಮಾಸ್ಟರ್ ಆಫ್ ಡಿಸ್ಟಾರ್ಶನ್' ಎಂದು ನಿಂದಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ.
ಮೋದಿಯವರು ಅವರು ತಮ್ಮ ರ್ಯಾಲಿಯಲ್ಲಿ ಪೂರ್ವಾಗ್ರಹ ಮತ್ತು ಮತಾಂಧತೆಯನ್ನು ಮಾತ್ರ ಪ್ರಚೋದಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿಯವರ ರೋಡ್ ಶೋ ಇಡೀ ನಗರವನ್ನು ನಿರ್ಬಂಧಿಸಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನಿಶ್ಚಿತತೆಯನ್ನು ಉಂಟುಮಾಡಿದೆ. ಇದು ಪ್ರಧಾನಿ ಎಷ್ಟು ಹತಾಶರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಹೀಗಾಗಿಯೇ ಅವರು 2 ದಿನದಲ್ಲಿ ರೋಡ್ ಶೋ ನಡೆಸಿ ಇಡೀ ನಗರವನ್ನು ಲಾಕ್ ಮಾಡುತ್ತಿದ್ದಾರೆ. ರೋಡ್ ಶೋ ಗಾಗಿ ಹಲವಾರು ಮರಗಳನ್ನು ಕಡಿಯಲಾಗುತ್ತಿದೆ. ಇಂತಹ ಹತಾಶ ಪ್ರಧಾನಿಯನ್ನು ಎಂದಾದಾರೂ ನೋಡಿದ್ದೀರಾ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಮೋದಿ ರೋಡ್ ಶೋ: 'ಕಮಲಾಧಿಪತಿ'ಗೆ ಹೂವಿನ ಸುರಿಮಳೆ, ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ ಜನ-ಎಲ್ಲೆಡೆ 'ನಮೋ' ಜಪ
ಮೋದಿಯವರು "ದಿ ಮಾಸ್ಟರ್ ಆಫ್ ಡಿಸ್ಟೋರ್ಶನ್. ರೋಡ್ ಶೋ ವೇಳೆ ಅವರು ಏನು ಹೇಳುತ್ತಾರೆಂಬುದು ನಮಗೆ ಈಗಾಗಲೇ ತಿಳಿದಿದೆ. ಅವರು ಪೂರ್ವಾಗ್ರಹ ಹಾಗೂ ಧರ್ಮಾಂಧತೆಯನ್ನು ಪ್ರಚೋದಿಸುತ್ತಾರೆಂದು ತಿಳಿಸಿದ್ದಾರೆ.
ಶೇ.40 ಕಮಿಷನ್ ಸರ್ಕಾರ, ಬೆಲೆ, ಹೆಚ್ಚುತ್ತಿರುವ ನಿರುದ್ಯೋಗ, ರಸ್ತೆಗಳ ಅಗೆತ ಈ ನೈಜ ವಿಚಾರಗಳ ಬಗ್ಗೆ ಅವರು ಮೌನ ತಾಳುತ್ತಾರೆಂಬುದು ನಮಗೆ ಗೊತ್ತಿದೆ ಎಂದಿದ್ದಾರೆ.