ರಾಜ್ಯ

ಪರಪುರಷನೊಂದಿಗೆ ಪತ್ನಿ ಸಲುಗೆ: ಅಡ್ಡಿಯಾದ ಪತಿಯ ಇರಿದು ಹತ್ಯೆ

Manjula VN

ಬೆಂಗಳೂರು: ಮಹದೇವಪುರದ ಬೈಕ್ ಮೆಕ್ಯಾನಿಕ್'ವೊಬ್ಬರನ್ನು ಇರಿದು ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಉದಯ್ ಕುಮಾರ್ (33) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಪ್ರಕರಣ ಸಂಬಂಧ ಅನ್ವರ್ ಖಾನ್ ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಉದಯ್ ಕುಮಾರ್ ಪತ್ನಿಯೊಂದಿಗೆ ನಗರದ ಮಹದೇವಪುರದಲ್ಲಿ ವಾಸವಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗನಿಗೆ ಚಿಕನ್ಪಾಕ್ಸ್ ಕಾಣಿಸಿಕೊಂಡಿದ್ದರಿಂದ ಪತ್ನಿ ಕಮ್ಮನನಹಳ್ಳಿಯಲ್ಲಿರುವ ಪೋಷಕರ ಮನೆಗೆ ಮಕ್ಕಳೊಂದಿಗೆ ಹೋಗಿದ್ದರು.

ಊರಿಗೆ ಹೋದ ಪತ್ನಿ ಪತಿಯ ಮೊಬೈಲ್'ಗೆ ದೂರವಾಣಿ ಕರೆ ಮಾಡಿದ್ದಾಳೆ. ಈ ವೇಳೆ ಪತಿ ಫೋನ್ ತೆಗೆಯದಿದ್ದಾಗ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾಳೆ. ಇದರಂತೆ ಮಾಲೀಕರು ಮನೆಗೆ ತೆರಳಿ ನೋಡಿದಾಗ ಉದಯ್ ಕುಮಾರ್ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.

‘ಉದಯ್‌ಕುಮಾರ್ ಅವರ ಪತ್ನಿ, ಹಲಸೂರು ಬಳಿಯ ಔಷಧಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಮಳಿಗೆ ಎದುರಿನ ಹೋಟೆಲ್‌ನಲ್ಲಿ ಅನ್ವರ್‌ ಖಾನ್ ಕೆಲಸಕ್ಕಿದ್ದ’. ‘ಉದಯ್ ಅವರ ಪತ್ನಿ ಜೊತೆ ಸ್ನೇಹ ಬೆಳೆಸಿದ್ದ ಅನ್ವರ್, ಸಲುಗೆಯಿಂದ ಇರಲು ಒತ್ತಾಯಿಸುತ್ತಿದ್ದ. ಈ ನಡುವೆ ಇಬ್ಬರ ನಡುವಿನ ಸಲುಗೆಯ ವಿಚಾರದ ತಿಳಿದ ಉದಯ್ ಪ್ರತೀದಿನ ಮದ್ಯ ಸೇವಿಸಿ ಮನೆಗೆ ಬಂದು ಹೊಡೆಯುತ್ತಿದ್ದ ಎಂದು ಮಹಿಳೆ ಅನ್ವರ್ ಬಳಿ ಹೇಳಿಕೊಂಡಿದ್ದಾಳೆ. ಇದರಿಂದ ಕೋಪಗೊಂಡು ಅನ್ವರ್ ಉದಯ್ ನನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹತ್ಯೆಯಲ್ಲಿ ಮಹಿಳೆಯ ಪಾತ್ರ ಇರುವ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT