ಬೆಂಗಳೂರು: ಯುವಕರಿಗೆ ನಿರುದ್ಯೋಗ ಭತ್ಯೆ ಜೊತೆಗೆ ಕೌಶಲ್ಯ ತರಬೇತಿಯನ್ನೂ ನೀಡುವಂತೆ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಈ ಗ್ಯಾರಂಟಿಗಳಲ್ಲಿ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ಮತ್ತು ಡಿಪ್ಲೊಮ ಪದವೀಧರರಿಗೆ 1,500 ರೂ. ಮಾಸಿಕ ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಿಸಿತ್ತು.
ಈ ಯೋಜನೆ ಕುರಿತು ಮಾತನಾಡಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿರ್ದೇಶಕ ಪ್ರೊ.ಡಿ.ರಾಜಶೇಖರ್ ಅವರು, ಯೋಜನೆಯು ನಿರುದ್ಯೋಗಿ ಯುವಕರು ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಿಂದ ಗೌರವಯುತ ಜೀವನ ನಡೆಸಲು ಉತ್ತಮ ಯೋಜನೆಯಾಗಿದೆ. ಸರ್ಕಾರದ ನಿರುದ್ಯೋಗ ಭತ್ಯೆಯಿಂದ ಆರ್ಥಿಕತೆಗೆ ಸ್ವಲ್ಪಮಟ್ಟಿಗಾದರೂ ಸಹಾಯ ಮಾಡುತ್ತದೆ. ಜರ್ಮನಿ, ಡೆನ್ಮಾರ್ಕ್, ನಾರ್ವೆ ಮತ್ತು ಇತರ ಹಲವು ದೇಶಗಳು ಇಂತಹ ಯೋಜನೆಗಳಿವೆ. ಸರ್ಕಾರ ನಿರುದ್ಯೋಗ ಭತ್ಯೆಯ ಜೊತೆಗೆ ಕೌಶಲ್ಯ ಅಭಿವೃದ್ಧಿ ಕೋರ್ಸ್ಗಳ ತರಬೇತಿಯನ್ನೂ ನೀಡುವ ಕೆಲಸ ಮಾಡಬೇಕು. ಇದರಿದ ಸೂಕ್ತವಾದ ಉದ್ಯೋಗಗಳನ್ನು ಹುಡುಕುವಲ್ಲಿ ಅವರಿಗೆ ನೆರವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಗೃಹಜ್ಯೋತಿ’ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್'ನಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ!
ನಿರುದ್ಯೋಗ ಭತ್ಯೆಯ ಜೊತೆಗೆ ಕೌಶಲ್ಯ ತರಬೇತಿ ನೀಡುವುದರಿಂದ ಯುವಕರು ಶೀಘ್ರಗತಿಯಲ್ಲಿ ಉದ್ಯೋಗ ಕಂಡುಕೊಳ್ಳಲು ಸಹಾಯವಾಗುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೂ ಹೊರೆಯಾಗುವುದಿಲ್ಲ. ಫಲಾನುಭವಿಗಳು ಭತ್ಯೆಯ ಮೇಲೆ ಅವಲಂಬಿತರಾದರೆ ಉದ್ಯೋಗ ಸಿಗುವವರೆಗೂ ಭತ್ಯೆಯನ್ನು ನೀಡುತ್ತಲೇ ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಸರ್ಕಾರ ಯೋಜನೆಗೆ ಮೀಸಲಿಡಲಾದ ಹಣ ದುರ್ಬಳಕೆಯಾಗದಂತೆಯೂ ನೋಡಿಕೊಳ್ಳಬೇಕಿದೆ. ಬ್ಯಾಂಕ್ ಖಾತೆಗಳಿಗೆ ಪಾವತಿಗಳನ್ನು ಪತ್ತೆಹಚ್ಚಲು ಈಗಾಗಲೇ ಹಲವಾರು ವ್ಯವಸ್ಥೆಗಳಿವೆ, ಸರ್ಕಾರವು ಅವುಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು" ಎಂದು ಸಲಹೆ ನೀಡಿದ್ದಾರೆ.