ರಾಜ್ಯ

ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅದ್ಧೂರಿ ಸ್ವಾಗತಕ್ಕೆ ಬೆಳಗಾವಿ ಸಜ್ಜು

Manjula VN

ಬೆಳಗಾವಿ: ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸಿದ್ಧತೆಗಳ ನಡೆಸುತ್ತಿದ್ದಾರೆ.

5ನೇ ಬಾರಿ ಕರ್ನಾಟಕದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸತೀಶ್ ಜಾರಕಿಹೊಳಿ ಸದ್ಯ ರಾಜ್ಯ ಸರ್ಕಾರದ ಪವರ್ ಫುಲ್ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ಅತ್ತ ಬೆಂಗಳೂರಿನಲ್ಲಿ ಸತೀಶ್ ಅವರು ಮಂತ್ರಿ ಸ್ಥಾನ ಸ್ವೀಕರಿಸುತ್ತಿದ್ದಂತೆ ಇತ್ತ ಬೆಳಗಾವಿಯಲ್ಲಿ ಅವರ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಮೇ.20 ರಂದು ಸತೀಶ್ ಅವರು ಹಾಗೂ ಮೇ.27 ರಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇಬ್ಬರೂ ನೂತನ ಸಚಿವರಾದ ನಂತರ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಸಂಜೆ 4 ಗಂಟೆಗೆ ಿಬ್ಬರೂ ನಾಯಕರು ಬೆಳಗಾವಿ ವಿಮಾನ ನಿಲ್ದಾಣ ತಲುಪಲಿದ್ದಾರೆ. ಒಟ್ಟಾಗಿ ಆಗಮಿಸುತ್ತಿರುವ ಸಚಿವರನ್ನು ಸ್ವಾಗತಿಸಲು ಇಡೀ ಬೆಳಗಾವಿ ಮಹಾನಗರ ಸಜ್ಜಾಗಿದ್ದು, ವಿಮಾನ ನಿಲ್ದಾಣದಿಂದಲೇ ಬೃಹತ್ ರ್ಯಾಲಿ ಮೂಲಕ ನಗರಕ್ಕೆ ಕರೆತರಲು ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅವರು, ಮೇ 28ರಂದು ಸಂಜೆ 4 ಗಂಟೆಗೆ ಸಚಿವರು, ಶಾಸಕರು ಒಳಗೊಂಡಿರುವ ತೆರೆದ ವಾಹನದ ಬೃಹತ್ ವಿಜಯೋತ್ಸವ ಮೆರವಣಿಗೆ ಕಾಂಗ್ರೆಸ್ ಭವನದಿಂದ ಆರಂಭಗೊಂಡು ಕೊಲ್ಲಾಪುರ ವೃತ್ತ, ಅಂಬೇಡ್ಕರ್ ಉದ್ಯಾನವನದಲ್ಲಿ  ಅಂಬೇಡ್ಕರ್ ಪ್ರತಿಮೆಗೆ, ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಪ್ರತಿಮೆಗೆ, ಬೋಗಾರವೇಸ್‌ನಲ್ಲಿ ಸಂಭಾಜಿ ಪ್ರತಿಮೆಗೆ ಮಾರ್ಲಾಪಣೆ ಮಾಡಲಿದ್ದಾರೆ. ಬಳಿಕ ವೀರಸೌಧದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೈಲ್ವೆ ಮೂರನೇ ಗೇಟ್ ಮೂಲಕ ಗೋವಾವಸೇಸ್‌ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ತದನಂತರ ಶಿವಾಜಿ ಉದ್ಯಾನವನದ ಮಾರ್ಗವಾಗಿ ಪ್ರವಾಸಿ ಮಂದಿರದಲ್ಲಿದಲ್ಲಿ  ಮುಗಿಯಲಿದೆ ಎಂದು ಮಾಹಿತಿ ನೀಡಿದರು.

ಬೆಳಗಾವಿ ಉತ್ತರ, ಗ್ರಾಮೀಣ, ಯಮಕನಮರಡಿ, ಖಾನಾಪುರ ವಿಧಾನಸಭಾ ಕ್ಷೇತ್ರಗಳಿಂದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಬರಲಿದ್ದಾರೆ. ಸುಮಾರು 5 ಸಾವಿರ ಬೈಕ್ ರ್ಯಾಲಿ ನಡೆಯಲಿದೆ. ಬಳಿಕ  ನೂತನ ಸಚಿವರು, ಶಾಸಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ವಿಜಯೋತ್ಸವ ಮೆರವಣಿಗೆಯಲ್ಲಿ ಬರೋಬ್ಬರಿ 10 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

SCROLL FOR NEXT