ರಾಜ್ಯ

ದಿವ್ಯಾಂಗರಿಗೆ ನೆರವಾಗಲು ಬಸ್‌ಗಳಲ್ಲಿ ಆಡಿಯೊ ಪ್ರಕಟಣಾ ವ್ಯವಸ್ಥೆ ಅಳವಡಿಸಿ: ಖಾಸಗಿ ಆಪರೇಟರ್‌ಗಳಿಗೆ ಹೈಕೋರ್ಟ್‌ ಸೂಚನೆ

Manjula VN

ಬೆಂಗಳೂರು: ದೃಷ್ಟಿ ವಿಶೇಷ ಚೇತನರೂ ಸೇರಿದಂತೆ ದಿವ್ಯಾಂಗರಿಗೆ ನೆರವಾಗುವ ದೃಷ್ಟಿಯಿಂದ ಬಸ್‌ಗಳಲ್ಲಿ ಆಡಿಯೊ ರೂಪದಲ್ಲಿ ಪ್ರಕಟಣಾ ವ್ಯವಸ್ಥೆ ಅಳವಡಿಸುವಂತೆ ಖಾಸಗಿ ಬಸ್ ಆಪರೇಟರ್‌ಗಳಿಗೆ ನಿರ್ದೇಶನ ನೀಡುವಂತೆ ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಬೆಂಗಳೂರಿನ ದೃಷಿ ವಿಶೇಷ ಚೇತನ ಎನ್. ಶ್ರೇಯಸ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎನ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ಅರ್ಜಿದಾರರು ಬಿಎಂಟಿಸಿ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಆಡಿಯೊ ವ್ಯವಸ್ಥೆ ಅಳವಡಿಸಲು ನಿರ್ದೇಶನ ನೀಡುವಂತೆ ಕೋರಿದ್ದಾರೆ. ಆದರೆ, ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್‌ಗಳೂ ಕೂಡ ಸಂಚಾರ ಕೈಗೊಳ್ಳುತ್ತಿರುವುದರಿಂದ ಆ ಬಸ್‌ಗಳಲ್ಲಿ ವಿಶೇಷ ಚೇತನರ ಪ್ರಯಾಣಕ್ಕೆ ಅಗತ್ಯ ನೆರವು ಕಲ್ಪಿಸಿಕೊಡಬೇಕಿದೆ” ಎಂದು ಆದೇಶಿಸಿದೆ.

“ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸಕಾರಾತ್ಮಕ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ. ಸರ್ಕಾರ ಖಾಸಗಿ ಬಸ್ ಆಪರೇಟರ್‌ಗಳಿಗೆ ಅಗತ್ಯ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಬೇಕು. ಆ ನಿರ್ದೇಶನ ಹಾಲಿ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಸ್‌ಗಳಿಗೆ ಮಾತ್ರವಲ್ಲ, ಹೊಸದಾಗಿ ಪರ್ಮಿಟ್ ನೀಡುವ ಬಸ್‌ಗಳಿಗೂ ಅನ್ವಯವಾಗುವಂತೆ ಇರಬೇಕು” ಎಂದು ನ್ಯಾಯಾಲಯ ತಾಕೀತು ಮಾಡಿದೆ.

“ಅರ್ಜಿದಾರರು ಬಿಎಂಟಿಸಿ ಮತ್ತು ರಾಜ್ಯ ಸರ್ಕಾರಕ್ಕೆ ವಿಶೇಷ ಚೇತನ ಸ್ನೇಹಿ ಪ್ರಯಾಣಿಕರಿಗೆ ಅನುಕೂಲವಾಗವಂತೆ ಮೊಬೈಲ್ ಅಪ್ಲಿಕೇಶನ್‌ ಸಿದ್ಧಪಡಿಸುವಂತೆ ಮನವಿ ಸಲ್ಲಿಸಬೇಕು. ಇದನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಾಲಯ ಸೂಚನೆ ನೀಡಿದೆ.

“ಬಿಎಂಟಿಸಿ ಮತ್ತು ರಾಜ್ಯ ಸರ್ಕಾರ ಈ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಬೇಕು” ಎಂದು ನಿರ್ದೇಶನ ನೀಡಿರುವ ನ್ಯಾಯಾಲಯ ನಾಲ್ಕು ವಾರ ವಿಚಾರಣೆಯನ್ನು ಮುಂದೂಡಿದೆ.

ಅರ್ಜಿದಾರರು, ಆರಂಭದಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮತ್ತು ಮೆಟ್ರೊ ರೈಲುಗಳಲ್ಲಿ ಆಡಿಯೊ ಪ್ರಕಟಣಾ ವ್ಯವಸ್ಥೆ ಇತ್ತು. ಇದರಿಂದ ದೃಷ್ಟಿ ವಿಶೇಷ ಚೇತನರಿಗೆ ಎಲ್ಲೆಲ್ಲಿ ಇಳಿಯಬೇಕು ಎಂಬುದಕ್ಕೆ ಅನುಕೂಲವಾಗುತ್ತದೆ. ಆದರೆ, ಆ ವ್ಯವಸ್ಥೆಯನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಗಿದೆ. ಇದರಿಂದ ತೀವ್ರ ತೊಂದರೆ ಆಗುತ್ತದೆ” ಎಂದು ಹೇಳಿದ್ದಾರೆ.

“ಇಂಥ ಆಡಿಯೊ ವ್ಯವಸ್ಥೆ ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಸಾರಿಗೆ ಬಸ್‌ಗಳಲ್ಲಿ ಚಾಲ್ತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಓಲಾ ಮತ್ತು ಉಬರ್ ಟ್ಯಾಕ್ಸಿಗಳಲ್ಲೂ ಸಹ ಗೂಗಲ್ ಮ್ಯಾಪ್ ಸಹಾಯದಿಂದ ನೆರವು ಲಭ್ಯವಾಗುತ್ತಿದೆ. ಆಡಿಯೊ ವ್ಯವಸ್ಥೆ ಇಲ್ಲದಿದ್ದರೆ ದಿವ್ಯಾಂಗರಿಗೆ ಸಾರ್ವಜನಿಕ ಹಾಗೂ ಖಾಸಗಿ ಬಸ್ ಹಾಗೂ ಇತರೆ ಸಂಚಾರ ವ್ಯವಸ್ಥೆಗಳಲ್ಲಿ ತೊಂದರೆ ಆಗಲಿದೆ” ಎಂದು ಪೀಠಕ್ಕೆ ವಿವರಿಸಿದ್ದರು.

SCROLL FOR NEXT