ರಾಜ್ಯ

ನಗರದಲ್ಲಿ ಮೆಟ್ರೊ ಮಾರ್ಗದ ಜೊತೆ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣಕ್ಕೆ ಚಿಂತನೆ: ಡಿಕೆ. ಶಿವಕುಮಾರ್‌

Manjula VN

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೊ’ ರೈಲು ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ನಿರ್ಮಿಸಲು ಸ್ಥಳಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಗರದಲ್ಲಿ ನಮ್ಮ ಮೆಟ್ರೋ ರೈಲು ಯೋಜನೆ ಜಾರಿಯಾಗುವ ಕಡೆಗಳಲ್ಲಿ ರಸ್ತೆ ಕಂ ರೈಲು ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಯೋಜನೆ ಅಡಿ ಮೆಟ್ರೋ ಮಾರ್ಗವನ್ನು ಮೇಲ್ಸೇತುವೆಗಳ ಮೇಲೆ ನಿರ್ಮಾಣ ಮಾಡಲಾಗವುದು. ಯೋಜನೆ ತಗುವ ವೆಚ್ಚವನ್ನು ಬಿಬಿಎಂಪಿ ಮತ್ತು ಬಿಎಂಆರ್'ಸಿಎಲ್ ಸಂಸ್ಥೆಗಳು ಹಂಚಿಕೊಳ್ಳಬಹುದು. ಅದರಿಂದ ಭೂ ಸ್ವಾಧೀನ ಹಾಗೂ ರಸ್ತೆ ನಿರ್ಮಾಣಕ್ಕೆ ಆಗುವ ಹೆಚ್ಚುವರಿ ವೆಚ್ಚವೂ ತಪ್ಪಲಿದ್ದು, ಶೀಘ್ರದಲ್ಲಿಯೇ ಮೇಲ್ಸೇತುವೆ ಮತ್ತು ಮೆಟ್ರೋ ರೈಲು ಮಾರ್ಗ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಮತ್ತೊಂದೆಡೆ ರಸ್ತೆಗಳ ನಿರ್ಮಾಣಕ್ಕೆ ಭೂ ಸ್ವಾಧೀನ ತುಂಬಾ ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಮಳೆ ನೀರುಗಾಲುವೆಗಳ ಅಕ್ಕಪಕ್ಕದ 50 ಮೀ ಜಾಗದಲ್ಲಿನ ಕಟ್ಟಡಗಳ ನಿರ್ಮಾಣ ನಿಷೇದಿಸಲ್ಪಟ್ಟಿರುವ ಬಫರ್ ಜೋನ್ ಸ್ಥಳದಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಕಾಲವೆಗಳ ಬಫರ್ ಝೋನ್ ಒತ್ತುವರಿ ತಡೆಯುವ ಜೊತೆಗೆ ರಸ್ತೆಗಳ ನಿರ್ಮಾಣಕ್ಕೆ ಅನಗತ್ಯ ಭೂಸ್ವಾಧೀನ ತಪ್ಪಿಸಬಹುದು ಎಂದು ಹೇಳಿದರು.

ನಗರವು ಸುಮಾರು 800 ಕಿ.ಮೀ ಉದ್ದದ ಮಳೆನೀರು ಚರಂಡಿ ಜಾಲವನ್ನು ಹೊಂದಿದೆ. ಜಾಗ ಇರುವ ಕಡೆ 100-150 ಕಿ.ಮೀ ಕಂಡರೂ ಹೊಸ ರಸ್ತೆ ಮಾಡುತ್ತೇವೆ. ಇದರಿಂದ ಪ್ರವಾಹ ತಡೆಯಬಹುದು, ವಾಸ್ತವದಲ್ಲಿ ರಾಜಕಾಲುವೆ ಪಕ್ಕದಲ್ಲಿ ಯಾವುದೇ ಕಟ್ಟಣ ನಿರ್ಮಿಸುವಂತಿಲ್ಲ. ಒಂದು ವೇಳೆ ನಿರ್ಮಾಣ ಮಾಡಿದ್ದರೆ, ಅಂತಹ ಕಟ್ಟಡಗಳಿಗೆ ಟಿಡಿಆರ್ ನೀಡಿ ವಶಕ್ಕೆ ಪಡೆದು ರಸ್ತೆ ನಿರ್ಮಾಣ ಮಾಡಲಾಗುವುದು. ಈ ರಸ್ತೆಯಲ್ಲಿ ಭಾರೀ ವಾಹನಗಳು ಓಡಾಡಲು ಸಾಧ್ಯವಾಗದಿದ್ದರೂ, ದ್ವಿಚಕ್ರ ವಾಹನಗಳು, ನಾಲ್ಕು ಚಕ್ರ ವಾಹನಗಳು ಹಾಗೂ ಶಾಲಾ ಮಕ್ಕಳ ವಾಹನಗಳು ಓಡಾಡುವಷ್ಟು ರಸ್ತೆ ನಿರ್ಮಿಸಲಾಗುವುದು. ಪ್ರಾಯೋಗಿಕವಾಗಿ ಮಹದೇವಪುರ ವಲಯದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಅದರಿಂದ ರಾಜಕಾಲುವೆಯಲ್ಲಿ ನೀರು ತುಂಬಿ ಹೊರ ಚೆಲ್ಲಿದರೂ. ಅದರಿಂದ ಮನೆಗಳಿಗೆ ನೀರು ಹರಿಯುವುದು ತಪ್ಪುತ್ತದೆ ಹಾಗೂ ಪ್ರವಾಹ ಪರಿಸ್ಥಿತಿಯೂ ಉಂಟಾಗುವುದಿಲ್ಲ ಎಂದರು.

SCROLL FOR NEXT